ಕೋಯಿಕ್ಕೋಡ್: ಪಂಚಾಯತ್ ಕಚೇರಿಯಲ್ಲಿ ಉದ್ಯೋಗದಲ್ಲಿದ್ದ ಯುವತಿಗೆ ಬೆಂಕಿ ಹಚ್ಚಿ, ತಾನು ಕೂಡ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ.
ಕೊಲೆಯಾದ ಯುವತಿ ಕೃಷ್ಣಪ್ರಿಯಾ (22) ಎಂದು ಗುರುತಿಸಲಾಗಿದೆ. ಥಿಕ್ಕೋಡಿ ನಿವಾಸಿ ನಂದನ್ ಕುಮಾರ್ ಎಂಬಾತ (26) ಯುವತಿಗೆ ಬೆಂಕಿ ಇಟ್ಟು ತಾನು ಕೂಡ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.
8 ದಿನಗಳ ಹಿಂದೆಯಷ್ಟೇ ಕೃಷ್ಣಪ್ರಿಯಾ, ಪಂಚಾಯತ್ ಕಚೇರಿಯಲ್ಲಿ ಯೋಜನಾ ಸಹಾಯಕಿ ಹುದ್ದೆಗೆ ಸೇರಿದ್ದರು. ನಂದನ್ಕುಮಾರ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಪಂಚಾಯತ್ ಕಚೇರಿಯ ಮುಂದೆಯೇ ಕೃಷ್ಣಪ್ರಿಯಾಗೆ ನಂದನ್ ಬೆಂಕಿ ಹಚ್ಚಿದ್ದ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇಬ್ಬರನ್ನು ಕೂಡ ಆಸ್ಪತ್ರೆಗೆ ಸಾಗಿಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಿಂದ ಮದುವೆ ಪ್ರಸ್ತಾಪದ ತಿರಸ್ಕಾರವೇ ಕಾರಣ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.