ಪಡುಬಿದ್ರಿ: ಹೆಚ್ಚೇನು ದಾಳಿಗೆ ಬೆದರಿದ ವ್ಯಕ್ತಿಯೊಬ್ಬರು ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಪಡುಬಿದ್ರೆ ಬೀಚ್ನಲ್ಲಿ ನಡೆದಿದೆ.
ಮೃತರನ್ನು ಪಡುಬಿದ್ರಿ ಬೀಚ್ ನಿವಾಸಿ ವಾಸುದೇವ ಡಿ.ಸಾಲ್ಯಾನ್ (65) ಎಂದು ಗುರುತಿಸಲಾಗಿದೆ. ಹೆಚ್ಚೇನು ದಾಳಿಗೆ ಒಳಗಾಗಿದ್ದ ಸ್ಥಳೀಯ ನಿವಾಸಿ ಚಂದ್ರಶೇಖರ್(62) ಹಾಗೂ ಶಂಕರ್ ಅಮೀನ್ ಎಂಬವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರು ಪಡುಬಿದ್ರಿ ಬೀಚ್ ಸಮೀಪ ನಡೆದುಕೊಂಡು ಹೋಗುತಿದ್ದ ವೇಳೆ ಹೆಚ್ಚೇನು ದಾಳಿ ನಡೆಸಿತ್ತೆನ್ನಲಾಗಿದೆ. ಜೇನುಗಳ ದಂಡು ಇವರಿಬ್ಬರ ಮೈಮೇಲೆ ಹಾಗೂ ಮುಖವನ್ನು ಕಚ್ಚಿ ಗಾಯಗೊಳಿಸಿತು. ಇವರಲ್ಲಿ ವಾಸುದೇವ ಸಾಲ್ಯಾನ್ ಹೆಚ್ಚೇನು ದಾಳಿಯಿಂದ ಭಯಭೀತರಾಗಿ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲೇ ಸಮೀಪದ ಸಮುದ್ರದ ನೀರಿಗೆ ಹಾರಿದರು. ಆದರೆ ಇವರು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಮೀನುಗಾರರಾಗಿರುವ ವಾಸುದೇವ ಸಾಲ್ಯಾನ್ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಚಂದ್ರಶೇಖರ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.