ಸಕಲೇಶಪುರ: ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟದಲ್ಲಿ ಭಾರತ ಸೋತಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಭಾನುವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲಿದೆ ಎಂಬ ಮಹದಾಸೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ ಪಂದ್ಯದಲ್ಲಿ ಭಾರತದ 10 ವಿಕೆಟ್ ಗಳಿಂದ ಪಾಕಿಸ್ತಾನಕ್ಕೆ ಶರಣಾಗಿದ್ದು ಅಭಿಮಾನಿಗಳಲ್ಲಿ ಬೇಸರ ತರಿಸಿತು.
ಇದರಿಂದ ಬೇಸತ್ತ ಸಕಲೇಶಪುರದ ಬಾಳ್ಳುಪೇಟೆಯ ಅಭಿಮಾನಿಯೊಬ್ಬರು ಟಿವಿಯನ್ನು ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಂ ರಸ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಸಂದೇಶ್ ಎಂಬುವರು ತಾವು ನೋಡುತ್ತಿದ್ದ 28 ಇಂಚಿನ ಎಲ್ ಇಡಿ ಟಿವಿಯನ್ನು ಕೈಗೆ ಸಿಕ್ಕಿದ ವಸ್ತುವಿನಿಂದ ಹೊಡೆದು ಹಾಕಿದ್ದಾರೆ.
ಸಂದೇಶ್ ಕೂಡ ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿದ್ದರು. 20 ಓವರುಗಳಲ್ಲಿ ಒಳಗೆ ವಿಕೆಟ್ ಸಹ ಕಬಳಿಸದೆ ನಿರಾಸಾದಾಯಕ ಪ್ರದರ್ಶನ ತೋರಿ ಸೋತ ಹಿನ್ನೆಲೆಯಲ್ಲಿ ಟಿವಿಯನ್ನು ಒಡೆದು ಹಾಕುವ ಮೂಲಕ ತಮ್ಮ ಸಿಟ್ಟು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದರು. ಜೊತೆಗೆ ತಾವೆಂದೂ ಕ್ರಿಕೆಟ್ ನೋಡುವುದಿಲ್ಲ ಎಂದು ಶಪಥ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.