
ಪುತ್ತೂರು: ಇಲ್ಲಿನ ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿ ಕುದ್ಕಾಡಿ ನಾರಾಯಣ ರೈ ಇಂದು ಪುತ್ತೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ನಾರಾಯಣ ರೈ ತನ್ನ ಪರ ವಕೀಲರಾದ ಮಹೇಶ್ ಕಜೆಯವರ ಜತೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ.
17ರ ಹರೆಯದ ಅಪ್ರಾಪ್ತ ದಲಿತ ಸಮುದಾಯದ ಬಾಲಕಿಯು ಸೆ.5 ರಂದು ಮಗುವಿಗೆ ಜನ್ಮ ನೀಡಿದ್ದರು . ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಸಹೋದರನನ್ನೆ ಈ ಪ್ರಕರಣದ ಆರೋಪಿ ಎಂದು ಬಂಧಿಸಲಾಗಿತ್ತು.

ಸೆ. 23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು ಅದರಲ್ಲಿ ಕುದ್ಕಾಡಿ ನಾರಾಯಣ ರೈಯವರೇ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಆ ಬಳಿಕ ನಾರಾಯಣ ರೈ ತಲೆಮರೆಸಿಕೊಂಡಿದ್ದು ತನ್ನ ವಕೀಲ ಮಹೇಶ್ ಕಜೆಯವರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೆಲ ದಿನಗಳ ಹಿಂದೆ ನ್ಯಾಯಾಲಯವು ತಿರಸ್ಕರಿಸಿತ್ತು.

ಆ ಬಳಿಕ ಅವರು ಅಡಗಿಕೊಂಡಿದ್ದರು ಎಂದು ಶಂಕಿಸಲಾಗಿದ್ದ ಈಶ್ವರಮಂಗಲದ ಮನೆಯೊಂದರ ಯಜಮಾನನ ಮನೆಗೆ ಪೋಲಿಸರು ನೊಟೀಸ್ ಜಾರಿ ಮಾಡಿದ್ದರು ಎಂದು ಹೇಳಲಾಗತ್ತಿದೆ. ನಾರಾಯಣ ರೈಯವರು ಇಂದು ನ್ಯಾಯಾಲಯಕ್ಕೆ ಹಾಜರಾದರು.









