ಎಸ್.ಐ.ಆರ್ ಬಗ್ಗೆ ಭಯ, ಗೊಂದಲ ಬೇಡ-ಬಂಟ್ವಾಳ ಉಪ ತಹಶೀಲ್ದಾರ್ ನವೀನ್ ಕುಮಾರ್






ಬಂಟ್ವಾಳ : ಎಸ್.ಐ.ಆರ್ ಬಗ್ಗೆ ಭಯ, ಗೊಂದಲಗಳು ಬೇಡ ಎಂದು ಬಂಟ್ವಾಳ ಉಪ ತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಹೇಳಿದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಹಾಗೂ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಇದರ ಜಂಟಿ ಆಶ್ರಯದಲ್ಲಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ನಡೆದ ಎಸ್.ಐ.ಆರ್ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಎಸ್.ಐ.ಆರ್ ಪ್ರಕ್ರಿಯೆಗೆ ಒಂದು ತಿಂಗಳ ಕಾಲಾವಕಾಶವಿದ್ದು, ಆಯಾಯ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಅವರು ಸಂಪೂರ್ಣವಾಗಿ ಸಹಕಾರ ನೀಡಲಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಾಗೃತ ಕರ್ನಾಟಕ ಬೆಂಗಳೂರು ತಂಡದ ಸದಸ್ಯ ನಿಸಾರ್ ಅಹ್ಮದ್ ಮಾತನಾಡಿ, ಮತದಾನ ಅತ್ಯಂತ ಶ್ರೇಷ್ಠವಾದ ಹಕ್ಕಾಗಿದ್ದು ಸಂವಿಧಾನ ಬದ್ಧವಾದ ಈ ಹಕ್ಕನ್ನು ಉಳಿಸಿಕೊಳ್ಳಲು ನಾವು ಮಾಡಬೇಕಾದ ಕರ್ತವ್ಯಗಳು, ಗಣತಿ ನಮೂನೆ ಭರ್ತಿ ಮಾಡುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಇನ್ನಿತರ ಸಂಶಯಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು.
ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಉದ್ಘಾಟಿಸಿದರು, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ. ಮಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ನೆಹರು ನಗರ, ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ, ಜಮೀಯ್ಯತುಲ್ ಫಲಾಹ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮಂಗಳವಾರ ನಿಧನರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಸಂತಾಪ ಸೂಚಿಸಿ ಅವರ ಮಗ್ಫಿರತ್ ಗಾಗಿ ಪ್ರಾರ್ಥನೆ ನೆರವೇರಿಸಲಾಯಿತು.
ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ಸ್ವಾಗತಿಸಿ, ಹಾಜಿ ಬಿ.ಎ. ಮಹಮ್ಮದ್ ಬಂಟ್ವಾಳ ವಂದಿಸಿದರು. ಜಮೀಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ ಹಕೀಂ ಕಲಾಯಿ ಕಾರ್ಯಕ್ರಮ ನಿರೂಪಿಸಿದರು .








