ಪುತ್ತೂರಿನಲ್ಲಿರುವ ಕೃಷಿ ಜಮೀನನ್ನು ನೋಡಲು ಬಂದು ಪುನಃ ಊರಿಗೆ ತೆರಳಿದ್ದ ಮೈಸೂರು ಸುಬ್ರಹ್ಮಣ್ಯ ನಗರದ ಫೋಟೋ ಗ್ರಾಫರ್ ಜಗದೀಶ್(58ವ)ರವರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಜಗದೀಶ್ ಅವರನ್ನು ಈಶ್ವರಮಂಗಲ ಸಮೀಪದ ಪುಳಿತ್ತಡಿಯಲ್ಲಿ ಆತನ ಮಾವನೇ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೊಲೆ ಮಾಡಿದ ಆರೋಪಿಗಳನ್ನು ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ, ಬಾಲಕೃಷ್ಣ ರವರ ಮಗ ಪ್ರಶಾಂತ್, ಪತ್ನಿ ಜಯಲಕ್ಷ್ಮೀ ಹಾಗೂ ಜೀವನ್ ಪ್ರಸಾದ್ ಎನ್ನಲಾಗಿದೆ.
ಕೃಷಿ ಭೂಮಿ ನೋಡಿಕೊಂಡು ಹೋಗಲು ಬಂದಿದ್ದ ಜಗದೀಶ್ ನಾಪತ್ತೆ:
ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯನಗರದಲ್ಲಿ ಫೊಟೋಗ್ರಾಫರ್ ಆಗಿರುವ ಜಗದೀಶ್ ತನ್ನ ಪತ್ನಿ, ಮಗನೊಂದಿಗೆ ಅಲ್ಲೇ ವಾಸ್ತವ್ಯ ಹೊಂದಿದ್ದರು. ತಿಂಗಳಿಗೊಮ್ಮೆ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿರುವ ಕೃಷಿ ಜಮೀನನ್ನು ನೋಡಲು ಬರುತ್ತಿದ್ದು, ನ.18ರಂದು ಮೈಸೂರಿನಿಂದ ಬೆಳಿಗ್ಗೆ ಪುತೂರು ಕುಂಜೂರುಪಂಜದ ಕೃಷಿ ಜಮೀನಿಗೆ ಬಂದಿದ್ದರು. ಬಳಿಕ ಅವರು ಪುತ್ತೂರಿಗೆ ಮಧ್ಯಾಹ್ನ ಹೋಗಿ ಸಂಜೆ ಪುಳಿತ್ತಡಿಗೆ ಬಂದು ಅಲ್ಲಿಂದ ಮೈಸೂರಿಗೆ ಹೋಗಲೆಂದು ಓಮ್ನಿ ಕಾರಿನಲ್ಲಿ ಸುಳ್ಯ ತನಕ ತೆರಳಿದ್ದರು. ಅಲ್ಲಿಂದ ಬಸ್ನಲ್ಲಿ ಮೈಸೂರಿಗೆ ಹೋಗುವುದಾಗಿ ತೆರಳಿದ್ದರೂ ಮೈಸೂರಿಗೆ ತಲುಪದೆ ಅವರು ನಾಪತ್ತೆಯಾಗಿದ್ದಾರೆ. ಅವರ ಪತ್ನಿ ಶರ್ಮಿಳಾ ಅವರು ನ.19ರ ನಸುಕಿನ ಜಾವ ಗಂಡ ಜಗದೀಶ್ ಅವರಿಗೆ ಕರೆ ಮಾಡಿದಾಗ ಅವರ ಪೋನ್ ಸ್ವಿಚ್ ಆಫ್ ಆಗಿತ್ತು. ಈ ನಿಟ್ಟಿನಲ್ಲಿ ಅವರು ಮನೆ ಮಂದಿಗೆ ಗಂಡ ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು.
ಸಹೋದರನಿಂದ ಠಾಣೆಗೆ ದೂರು:
ಜಗದೀಶ್ ಅವರ ಸಹೋದರ ಮಂಗಳೂರಿನಲ್ಲಿರುವ ಶಶಿಧರ್ ಎಂಬವರು ಪುತ್ತೂರು ಸಂಪ್ಯ ಪೋಲಿಸರಿಗೆ ಜಗದೀಶ್ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಮಾವನಿಂದಲೇ ಕೊಲೆ..!!
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಜಗದೀಶ್ ರನ್ನು ಮಾವನಾದ ಬಾಲಕೃಷ್ಣ ರೈ, ತನ್ನ ಮಗ, ಪತ್ನಿ ಹಾಗೂ ಹತ್ತಿರ ಮನೆಯ ನಿವಾಸಿ ಜೀವನ್ ಪ್ರಸಾದ್ ಜೊತೆಗೂಡಿ ಕೊಲೆ ಮಾಡಿ ಮನೆಯ ಹತ್ತಿರದ ಕಾಡು ಪ್ರದೇಶದಲ್ಲಿ ಗುಂಡಿ ತೆಗೆದು ಮೃತದೇಹವನ್ನು ಹೂತು ಹಾಕಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕಾಡು ಪ್ರದೇಶದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದ ಮೃತದೇಹವನ್ನು ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಕರೆದೊಯ್ಯಲಾಯಿತು.
ಈ ಬಗ್ಗೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅ.ಕ್ರ.101/2021 ಕಲಂ: 364, 302, 301 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ..