ಪುತ್ತೂರು: ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಮಧ್ಯಾಹ್ನ ಊಟದ ಸಮಯದಲ್ಲಿ ಅವರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದ್ದು ಪೊಲೀಸ್ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥವಾಗಿದೆ ಪ್ರಸಂಗ ನಡೆದಿದೆ.
ತಾಲೂಕು ಆಡಳಿತ ಸೌಧದಲ್ಲಿರುವ ರೆಕಾರ್ಡ್ ರೂಂ ಮುಖ್ಯಸ್ಥ ಮತ್ತು ಕಡಬದ ಆಹಾರದ ವಿಭಾಗದ ಅಧಿಕಾರಿಯ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ರೆಕಾರ್ಡ್ ರೂಮ್ಗೆ ಪ್ರವೇಶವಿಲ್ಲದಿದ್ದರೂ ಚಂದು ನಾಯ್ಕ್ ಎಂಬವರು ಹೋಗಿರುವುದನ್ನು ಮಹೇಶ್ ಎಂಬವರು ಪ್ರಶ್ನಿಸಿದ್ದಾರೆ. ಇದೇ ವಿಚಾರದಲ್ಲಿ ಅವರಿಬ್ಬರೊಳಗೆ ಮಾತಿನ ಚಕಮಕಿ ನಡೆದಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಮತ್ತೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಅವರಿಬ್ಬರೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಆರೋಪ ಹೊರಿಸಿಕೊಂಡು ದೂರು ನೀಡಿದ್ದರು. ಸಂಜೆ ವೇಳೆ ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ಅವರು ಠಾಣೆಗೆ ತೆರಳಿ ಇನ್ಸ್ಸ್ಪೆಕ್ಟರ್ ಜೊತೆ ಮಾತುಕತೆ ನಡೆಸಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಿರುವುದಾಗಿ ತಿಳಿದು ಬಂದಿದೆ