ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯಲ್ಲಿ ೨೦೨೨-೨೩ನೇ ಶೈಕ್ಷಣಿಕ ಸಾಲಿನ SSLC ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮವು ಮಾಯ್ ದೆ ದೇವುಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್, 44 ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಅಭಿನಂದಿಸಿ “ವಿದ್ಯಾರ್ಥಿಗಳು ಪ್ರತಿಭೆಗಳ ಕಣಜ”. ಈ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಸವಲತ್ತು ದೊರೆತಾಗ ಆ ಪ್ರತಿಭೆಗಳು ಪ್ರಜ್ವಲವಾಗಲು ಸಾಧ್ಯ. ನಾವು ಕೇವಲ ಪುರಸ್ಕಾರಗಳನ್ನು ಪಡೆಯುವವರು ಮಾತ್ರ ಆಗದೆ, ಸಮಾಜಕ್ಕೆ ಪ್ರತಿಫಲ ನೀಡುವ ಹಾಗೂ ಪ್ರೀತಿಯನ್ನು ಹಂಚುವ ¸ಹೃದಯಿಗಳಾಗಬೇಕೆಂದು ಸಂದೇಶ ನೀಡಿ ಆಶೀರ್ವಾದಿಸಿದರು.
ಕಳೆದ ಸಾಲಿನ ರಕ್ಷಕ ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ ಅಪರ್ಣಾರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿದ್ಯೆ ಕೇವಲ ಪುರಸ್ಕಾರಗಳಿಗೆ ಸೀಮಿತವಾಗದೆ ಸಮಾಜದಲ್ಲಿ, ಮೌಲ್ಯಧಾರಿತ ಜೀವನ ನಡೆಸಲು ಪೂರಕವಾಗಿರಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟರವರು ಜೀವನದಲ್ಲಿ ಗುರಿ ಇರಬೇಕು, ಆ ಗುರಿ ತಲುಪಲು ಸತತ ಪ್ರಯತ್ನ ಅಗತ್ಯ ಹಾಗೂ ನಿಮ್ಮ ಯಶಸ್ವಿಗೆ ಕಾರಣಕರ್ತರಾದ ನಿಮ್ಮ ಹೆತ್ತವರು, ವಿದ್ಯೆ ನೀಡಿದ ಗುರುಗಳು, ಹಾಗೂ ಶಾಲೆಯನ್ನು ಎಂದಿಗೂ ಮರೆಯದಿರಿ ಎಂದು ಶುಭ ಹಾರೈಸಿದರು.
ಪೂಜ್ಯ ಸಂಚಾಲಕರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 44ವಿದ್ಯಾರ್ಥಿನಿಯರಿಗೆ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು ಹಾಗೂ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿನಿಯರಾದ ಕು. ಎಸ್ ಅನಿಕ ಹಾಗೂ ಕು. ವಿನುತ ಬಿ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಶಾಲಾ ವಾದ್ಯವೃಂದದೊಂದಿಗೆ ಬರಮಾಡಿಕೊಳ್ಳಲಾಯಿತು.
ಸಮಾರಂಭವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊರವರು ಪ್ರಾಸ್ತವಿಕವಾಗಿ ಮಾತನಾಡಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿ, ನೆರೆದ ಸರ್ವರನ್ನು ಸ್ವಾಗತಿಸಿದರು. ಫೆಲ್ಸಿ ಡಿಸೋಜರವರು ವಂದಿಸಿದರು. ಶಿಕ್ಷಕಿ ಲೆನಿಟಾ ಮೋರಸ್ ರವರು ಶಾಲಾ ಪರವಾಗಿ ಪುರಸ್ಕೃತ ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು. ಶಿಕ್ಷಕಿ ರೂಪ ಡಿಕೋಸ್ಟರವರು ಕಾರ್ಯಕ್ರಮವನ್ನು ನಿರೂಪಿಸಿದರು.