
ವಿಟ್ಲ: ವಿಟ್ಲ ಪೇಟೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ವಾಹನ ದಟ್ಟನೆ ಸಮಸ್ಯೆ ಪರಿಹಾರ ಬಗ್ಗೆ ರಸ್ತೆ ಅಗಲೀಕರಣ ವಿಚಾರದಲ್ಲಿ ಸಾಧಕ-ಬಾಧಕ ಬಗ್ಗೆ ಕಟ್ಟಡ ಮಾಲಕರ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಶಾಸಕರು ಲೋಕೋಪಯೋಗಿ ಇಲಾಖೆಗೆ ಸರ್ಕಾರದಿಂದ ಸರ್ವೇ ನಡೆಸಲು ಸೂಚನೆ ಬಂದಿದ್ದು, ಅನಧಿಕೃತ ಕಟ್ಟಡಗಳು, ರಸ್ತೆ ಒತ್ತುವರಿಯ ಬಗ್ಗೆ ಸರ್ವೇ ನಡೆಯಲಿದೆ.ಇಲ್ಲಿ ಕಾಂಗ್ರೆಸ್ – ಬಿಜೆಪಿ ಇಲ್ಲ.ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವವ ನಾನಲ್ಲ. ನನಗೂ ಬೇಸರ ಇದೆ. ನೀವುಗಳು ಇಲ್ಲಿ ಉದ್ಯಮವನ್ನು ಮಾಡುತ್ತಾ ಬದುಕು ಕಟ್ಟಿಕೊಂಡವರು. ನಾನು ಮಾತನಾಡುವಾಗ ಬೇಸರವಾಗ ಬಹುದು. ಎಷ್ಟು ವರ್ಷಾ ಅಂತ ಹೀಗೆ ಮುಂದುವರೆಯುವುದು. ಇಂದಲ್ಲ ನಾಳೆ ಹಳೇ ಕಟ್ಟಡಗಳು ಬೀಳುತ್ತದೆ. ಆಗ ನೀವುಗಳು ರಸ್ತೆ ಮಾರ್ಜಿನ್ ಬಿಟ್ಟೆ ಕಟ್ಟಡ ಕಟ್ಟಬೇಕಾಗುತ್ತದೆ. ರಸ್ತೆಗೆ ಜಾಗ ಬಿಟ್ಟು ಕೊಟ್ಟವರಿಗೆ ಸಬ್ ರಿಜಿಸ್ಟ್ ರ್ ರೇಟಿನ ಮೂರು ಪಾಲು ನೀಡಲಾಗುವುದು.
ಸರಿಯಾದ ರೀತಿಯಲ್ಲಿ ಸರ್ವೆ ಮಾಡಿ ಅವರಿಗೆ ಸಿಗಬೇಕಾದ ಹಣವನ್ನು ನೀಡಿ ಬಳಿಕ ಅಗಲೀಕರಣ ಮಾಡಲಾಗುವುದು. ನಿಮಗೆ ಹೊಂದಾಣಿಕೆ ಆಗುವ ರೀತಿಯಲ್ಲಿ ಮುಂದುವರೆಯೋಣ.ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಯಾದ ನನ್ನ ಧರ್ಮ.ಅನುಮತಿ ಇಲ್ಲದೆ ಸರಕಾರಿ ಜಾಗದಲ್ಲಿ ಕಟ್ಟಿದ ಕಟ್ಟಡಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ.ರಸ್ತೆ ಅಗಲೀಕರಣ ಮಾಡಿ ಎಂದು ನನಗೆ ಸುಮಾರು 200 ಕೆರೆ ಬಂದಿದೆ. ಅಭಿವೃದ್ಧಿಯ ವಿಚಾರದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನಿಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ.ಎಲ್ಲರೂ ಜೊತೆಯಾಗಿ ಸೇರಿ ಅಭಿವೃದ್ಧಿ ಮಾಡುವ ಕೆಲಸ ಮಾಡೋಣ. ಉತ್ತಮ ಕೆಲಸ ಆಗುವಾಗ ಬೇಸರವಾಗುವುದು ಸಹಜ ಈಗಾಗಲೇ ರಸ್ತೆ ಅಗಲೀಕರಣ ವಾಗುವಾಗ 22 ಮೀ. ನಷ್ಟು ಜಾಗ ಬಿಟ್ಟುಕೊಡಬೇಕಾಗುತ್ತದೆ.
ಸಾಧಕ ಬಾಧಕಗಳನ್ನು ನೋಡಿಕೊಂಡು ಪೇಟೆಯಲ್ಲಿ ಅದನ್ನು 15 ಮೀ.ಗೆ ಇಳಿಸಲಾಗುವುದೋ ಎಂದು ಪರಿಶೀಲನೆ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯೊಟ್ಟು, ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ಸ್ಥಾಯೀ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ., ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್ ಉಪಸ್ಥಿತರಿದ್ದರು.








