ಪುತ್ತೂರು: ಸುಮಾರು 15 ವರ್ಷಗಳ ಹಿಂದೆ ನಡೆದ ಕಳವು ಪ್ರಕರಣದಲ್ಲಿ ಬಂಧಿತಾರಾಗಿದ್ದ ಆರೋಪಿಗಳಲ್ಲಿ ಓರ್ವನಿಗೆ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5,000 ರೂ. ದಂಡವನ್ನು ವಿಧಿಸಿದೆ.
ಘಟನೆ ವಿವರ:
ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮಹೇಂದ್ರ ಕುಮಾರ್ ಎಂಬವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಸೂಟ್ ಕೇಸ್ ನಲ್ಲಿದ್ದ ಸುಮಾರು 43,000 ರೂ. ಬೆಲೆಬಾಳುವ 50.930 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಸುಮಾರು 15 ವರ್ಷಗಳ ಹಿಂದೆ ನಡೆದಿದ್ದು,
ಆರೋಪಿಗಳನ್ನು ಸಂತೋಷ ಮತ್ತು ನಾಗರಾಜ್ ಬಳೆಗಾರ ಎಂದು ಗುರುತಿಸಲಾಗಿದೆ.
ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕರಾದ ತಿಲಕ್ ಚಂದ್ರ ರವರು ಆರೋಪಿಗಳು ಹಾಗೂ ಕಳವುಗೈದ ಸೊತ್ತುಗಳನ್ನು ದಸ್ತಗಿರಿ ಮಾಡಿ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿಕೊಂಡದ್ದನ್ನು ಆಗಿನ ಪುತ್ತೂರು ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ ನಾಯ್ಕ್ ರವರು ಆರೋಪಿಗಳ ಮೇಲೆ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ ನಂ: 24/2006 ಕಲಂ: 450, 380 ಜೊತೆಗೆ 34 ಐ.ಪಿ.ಸಿ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣವು ನ್ಯಾಯಾಲಯದಲ್ಲಿ ಸಿ.ಸಿ ನಂ. 864/2014 ರಂತೆ ವಿಚಾರಣೆ ನಡೆದು ಇಂದು ಓರ್ವ ಆರೋಪಿ ಮಂಗಳೂರಿನ ಸುರತ್ಕಲ್ ನ ಹೊನ್ನಕಟ್ಟೆ ವಿದ್ಯಾನಗರ ನಿವಾಸಿ ನಾಗರಾಜ್ ಬಳೆಗಾರ (34) ಎಂಬಾತನಿಗೆ ಶಿಕ್ಷೆಯನ್ನು ಪ್ರಕಟಿಸಿದ್ದು, ನ್ಯಾಯಾಲಯವು ಕಲಂ: 457 ಐ.ಪಿ.ಸಿ ಗೆ ಸಂಬಂಧಿಸಿದಂತೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5,000 ರೂ. ದಂಡವನ್ನು ವಿಧಿಸಿದೆ. ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ. ಕಲಂ: 380 ಐ.ಪಿ.ಸಿ ಗೆ ಸಂಬಂಧಿಸಿದಂತೆ 4 ವರ್ಷಗಳ ಕಾರಾಗೃಹ ವಾಸ ಹಾಗೂ 4,000/- ರೂ ಗಳ ದಂಡ ತಪ್ಪಿದ್ದಲ್ಲಿ 5 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ . ಆರೋಪಿಯು ಪ್ರಸ್ತುತ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.