ಬಂಟ್ವಾಳ: ಜನ ಶಿಕ್ಷಣ ಟ್ರಸ್ಟ್ ದಿ ಹಂಗರ್ ಪ್ರಾಜೆಕ್ಟ್ ಸುಗ್ರಾಮ ಗ್ರಾ.ಪಂ ಚುನಾಯಿತ ಮಹಿಳಾ ಸದಸ್ಯರ ಒಕ್ಕೂಟ, ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಅಂಬೇಡ್ಕರ್ ಭವನದಲ್ಲಿ ಜಾಗೃತಿ ವೇದಿಕೆ ಸಭೆಯು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಮೋಹಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆ ಸೋಕ್ ಪಿಟ್ ಅಭಿಯಾನ ಎರೆಹುಳು ತೊಟ್ಟಿ ನಿರ್ಮಾಣ ಹಾಗೂ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿಯ ಬಗ್ಗೆ ಜನಶಿಕ್ಷಣ ಟ್ರಸ್ಟ್ ನ ಸಂಯೋಜಕ ಚೇತನ್ ಮಾಹಿತಿ ನೀಡಿದರು. ಬಂಟ್ವಾಳ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಸೌಮ್ಯ ಅವರು ಭಾಗವಹಿಸಿ ಸಾಂತ್ವನ ನೀಡುತ್ತಿರುವ ಸೇವೆಗಳು ಮಹಿಳೆಯರಿಗೆ ದೌರ್ಜನ್ಯಕ್ಕೊಳಗಾದ ದೂರು ನೀಡಿದರೆ ಕೈಗೊಳ್ಳುವ ಕ್ರಮಗಳ ಬಗ್ಗೆ ಹಾಗೂ ಮಹಿಳಾ ಸಹಾಯವಾಣಿಯ ಬಗ್ಗೆ ತಿಳಿಸಿಕೊಟ್ಟರು.
ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಯವರು ಮಹಿಳೆಯರ ಆರೋಗ್ಯ ಮಹಿಳೆಯರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಯು.ಎನ್.ಡಿ.ಪಿ ಸಮುದಾಯ ಸಂಯೋಜಕಿ ದಿವ್ಯ ಸ್ವಉದ್ಯೋಗದಲ್ಲಿ ಮಹಿಳೆಯರೂ ತೊಡಗಿಸಿಕೊಂಡು ಹೆಚ್ಚಿನ ಆರ್ಥಿಕ ಸಬಲೀಕರಣ ಸಾಧಿಸಲು ಯುಎನ್ ಡಿಪಿ ನಡೆಸುತ್ತಿರುವ ಕೆಲಸ, ಕಾರ್ಯಕ್ರಮ ಸಂಯೋಜನೆಯ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಮುಂಬರುವ ವಾರ್ಡ್ ಸಭೆಯನ್ನು ಮಾದರಿಯಾಗಿ ಸಂಘಟಿಸಲು ಪ್ರತಿಯೊಬ್ಬ ಮತದಾರರು ಪ್ರಯತ್ನಿಸುವುದು ಹಾಗೂ ಜನಸ್ನೇಹಿ ವಾರ್ಡ್ ಗ್ರಾಮ ಸಭೆ ನಡೆಸಲು ಸಂಕಲ್ಪ ಮಾಡಲಾಯಿತು. ಕೆಂಪುಗುಡ್ಡೆ ಕಾಲೊನಿಯ ಮಹಿಳೆಯರು ಕಾಯಕ ತಂಡವನ್ನು ಕಟ್ಟಿಕೊಂಡು ಉದ್ಯೋಗ ಖಾತರಿಯಡಿ ಪೌಷ್ಠಿಕ ತೋಟ ದಂಥ ಕೆಲಸಗಳನ್ನು ನಿರ್ಮಿಸಿರುವುದು ಹಾಗೂ ಮುಂದಕ್ಕೂ ಕಾಯಕ ಗುಂಪಿನಲ್ಲಿ ನೂರು ದಿನಗಳ ಕೆಲಸವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸುನೀಲ್, ಸದಸ್ಯರುಗಳಾದ ಪೂರ್ಣಿಮಾ, ಯಶೋದಾ, ಅಶ್ವಿನಿ, ಸೌಮ್ಯ ಚಂದ್ರಾವತಿ ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ಸಹಕರಿಸಿದರು.