ಬದಿಯಡ್ಕ: ಹತ್ಯೆಯತ್ನ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿ ಗಳಾದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಪೆರ್ಲ ಕನ್ನಟಿಕಾನ ನಿವಾಸಿ ಉಡುಂಬು ನೌಶಾದ್ (25), ಪೆರ್ಲ ನಿವಾಸಿ ಕತ್ತಿ ನೌಶಾದ್ (29) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಕೈಯಿಂದ ಒಂದು ಏರ್ ಪಿಸ್ತೂಲು ವಶಪಡಿಸಲಾಗಿದೆ.
ನಿನ್ನೆ ರಾತ್ರಿ ಬದಿಯಡ್ಕ ಸಿ.ಐ. ಅಶ್ವಿನ್ ನೇತೃತ್ವದ ಪೊಲೀಸರು ನೆಲ್ಲಿಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಆಗಮಿಸಿದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಈ ಕಾರಿನಲ್ಲಿ ಉಡುಂಬು ನೌಶಾದ್ ಹಾಗೂ ಕತ್ತಿ ನೌಶಾದ್ ಪ್ರಯಾಣಿಸುತ್ತಿರುವುದಾಗಿ ತಿಳಿದುಬಂದಿದೆ. ಇವರ ಮೇಲೆ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಒಂದು ಏರ್ ಪಿಸ್ತೂಲು ಪತ್ತೆಯಾಗಿದೆ. ಯಾವುದೋ ದುಷ್ಕೃತ್ಯಕ್ಕಾಗಿ ಇವರು ಏರ್ ಪಿಸ್ತೂಲಿನೊಂದಿಗೆ ಸಂಚರಿಸುತ್ತಿದ್ದಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಬಂಧಿತರ ಪೈಕಿ ಉಡುಂಬು ನೌಶಾದ್ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಹತ್ಯೆಯತ್ನ ಸಹಿತ ಕೆಲವು ಕೇಸುಗಳು ದಾಖಲಾಗಿದೆ. ಅದೇ ರೀತಿ ಕತ್ತಿ ನೌಶಾದ್ಗೆ ಕೂಡಾ ಹಲವು ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.