ಬೆಳ್ತಂಗಡಿ: ಹೆಚ್.ಐ.ವಿ. ಸೋಂಕಿತರಿಗೆ ತಾರತಮ್ಯ ಮಾಡದೇ ಎಲ್ಲರಂತೆಯೇ ಅವರನ್ನು ಸಮಾನವಾಗಿ ಕಾಣಬೇಕು ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ನುಡಿದರು.
ಅವರು ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ನವಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮ ಹಾಗೂ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಡಿಸೆಂಬರ್ – 1 ವಿಶ್ವ ಏಡ್ಸ್ ದಿನಾಚರಣೆಯ ಸಮಾವೇಶದಲ್ಲಿ ಭಾಗಿಗಳಾಗಿ ಆಶೀರ್ವಚನ ನೀಡಿದರು.
ಮಹಿಳಾ ಮತ್ತು ಮಕ್ಕಳ ಸಹಾಯಕ ಕಲ್ಯಾಣಾಧಿಕಾರಿ ರತ್ನಾವತಿ ಪಿ., ಕಲ್ಪವೃಕ್ಷಕ್ಕೆ ನೀರು ಎರೆಯುವುದು ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಅಮ್ಮಿ ಎ. ಮುಖ್ಯ ಅತಿಥಿಗಳಾಗಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಹಿರಿಯ ನಿರ್ದೇಶಕರಾಗಿದ್ದು, ಹೆಚ್.ಐ.ವಿ./ಏಡ್ಸ್ ಸೋಂಕಿತರಿಗೆ ತಾವು ಸಲ್ಲಿಸಿದ ವಿಶೇಷ ಸೇವೆಯನ್ನು ಗುರುತಿಸಿ ಸಂಸ್ಥೆಯನ್ನು ಗುರುತಿಸಲು ಕಾರಣರಾದ ವಂ. ಫಾ. ಜೋಸ್ ಆಯಾಂಕುಡಿಯವರನ್ನು ಸನ್ಮಾನಿಸಲಾಯಿತು.
ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮುರಳೀಕೃಷ್ಣ ಇರ್ವತ್ರಾಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹೆಚ್.ಐ.ವಿ./ಏಡ್ಸ್ ರೋಗದ ಬಗ್ಗೆ ಮಾಹಿತಿ ನೀಡಿದರು. ನವಚೈತನ್ಯ ಸಂಘದ ಅಧ್ಯಕ್ಷೆ ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂ. ಫಾ. ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಏಲಿಯಾಮ ತೋಮಸ್ ಧನ್ಯವಾದವಿತ್ತರು. ಸ್ಟಾರ್ ಸಂಘದ ಸದಸ್ಯರು ಪ್ರಾರ್ಥನೆ ಹಾಗೂ ಆಶಾ ಮಾತು ಮತ್ತು ಬಳಗದವರು ಅರಿವಿನ ಹಾಡು ಹಾಡಿದರು. ಸುಮಾರು 230 ಮಂದಿ ಉಪಸ್ಥಿತರಿದ್ದರು.