Wednesday, May 8, 2024
spot_imgspot_img
spot_imgspot_img

ಭಾರತ 5ಜಿ ಸೇವೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ; ಪ್ರಧಾನಿ ನರೇಂದ್ರ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ. 2G, 3G, 4G ಸಮಯದಲ್ಲಿ ಭಾರತವು ತಂತ್ರಜ್ಞಾನಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ, 5ಜಿ (5G) ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 5G ಸೌಲಭ್ಯದೊಂದಿಗೆ ಭಾರತವು ಮೊದಲ ಬಾರಿಗೆ ಟೆಲಿಕಾಂ ತಂತ್ರಜ್ಞಾನದಲ್ಲಿ ಜಾಗತಿಕ ಗುಣಮಟ್ಟವನ್ನು ಹೊಂದಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ 5ಜಿ ತಂತ್ರಜ್ಞಾನ ಸೇವೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಅನೇಕ ಜನರು ನಮ್ಮ ಸರ್ಕಾರದ ಆತ್ಮ ನಿರ್ಭರ ಭಾರತವನ್ನು ಗೇಲಿ ಮಾಡುತ್ತಿದ್ದರು. ಆದರೆ ನಾವು ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಹೆಚ್ಚಿಸಿದ್ದೇವೆ. 8 ವರ್ಷಗಳ ಹಿಂದೆ ದೇಶದಲ್ಲಿ ಕೇವಲ 2 ಮೊಬೈಲ್ ಉತ್ಪಾದನಾ ಘಟಕಗಳಿದ್ದವು. ಇಂದು ಭಾರತದಲ್ಲಿ 200ಕ್ಕೂ ಹೆಚ್ಚು ಘಟಕಗಳಿವೆ. ನಾವು ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದೇವೆ ಮತ್ತು ನಮ್ಮ ಮೊಬೈಲ್ ಫೋನ್ ಅನ್ನು ಜಗತ್ತಿಗೆ ರಫ್ತು ಮಾಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2014ರಲ್ಲಿ ಭಾರತವು 25 ಕೋಟಿ ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿತ್ತು. ಈಗ ಈ ಸಂಖ್ಯೆ 85 ಕೋಟಿಯಾಗಿದೆ. ಗ್ರಾಮೀಣ ಪ್ರದೇಶದಿಂದ ಹೆಚ್ಚು ಇಂಟರ್ನೆಟ್ ಬಳಕೆದಾರರು ಬರುತ್ತಿದ್ದಾರೆ. ಹೊಸ ಮತ್ತು ಹಳೆಯ ಬಳಕೆದಾರರು ಇಂಟರ್ನೆಟ್ ಮತ್ತು ಅದರ ಸಾಧ್ಯತೆಗಳಿಂದ ಹೇಗೆ ಪ್ರಯೋಜನ ಪಡೆಯುತ್ತಾರೆ ಎಂಬುದರಲ್ಲಿ 5G ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

2014ರವರೆಗೆ ನಾವು ನಮ್ಮ ಮೊಬೈಲ್ ಫೋನ್‌ಗಳ ಶೇ.100 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಅದಕ್ಕಾಗಿಯೇ ನಾವು ಈ ಮೊಬೈಲ್ ಕ್ಷೇತ್ರದಲ್ಲಿ ‘ಆತ್ಮನಿರ್ಭರ್’ ಆಗಲು ನಿರ್ಧರಿಸಿದ್ದೇವೆ. ಭಾರತದಲ್ಲಿ ನಾವು ಈಗ 200 ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿದ್ದೇವೆ. ಇಂದು ದೇಶದ ಪರವಾಗಿ, ದೇಶದ ಟೆಲಿಕಾಂ ಉದ್ಯಮದ ಪರವಾಗಿ, 130 ಕೋಟಿ ಭಾರತೀಯರಿಗೆ 5G ರೂಪದಲ್ಲಿ ಅದ್ಭುತ ಕೊಡುಗೆ ಸಿಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

5ಜಿ ದೇಶದಲ್ಲಿ ಹೊಸ ಯುಗದ ಬಾಗಿಲು ತೆರೆದಿದೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಭಾರತೀಯನನ್ನು ಅಭಿನಂದಿಸುತ್ತೇನೆ. ನವ ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕನಾಗಿ ಉಳಿಯುವುದಿಲ್ಲ. ಆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಭವಿಷ್ಯದಲ್ಲಿ ವೈರ್‌ಲೆಸ್ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವಲ್ಲಿ ಭಾರತವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಡಿಜಿಟಲ್ ಇಂಡಿಯಾ ಕೇವಲ ಸರ್ಕಾರದ ಯೋಜನೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಡಿಜಿಟಲ್ ಇಂಡಿಯಾ ಹೆಸರಿಗಷ್ಟೇ ಅಲ್ಲ, ದೇಶದ ಅಭಿವೃದ್ಧಿಯ ದೊಡ್ಡ ದೃಷ್ಟಿಕೋನವಾಗಿದೆ ಎಂದು ಮೋದಿ ಹೇಳಿದ್ದಾರೆ.

ಜನರಿಗಾಗಿ ಕೆಲಸ ಮಾಡುವ, ಜನರೊಂದಿಗೆ ಕೆಲಸ ಮಾಡುವ ತಂತ್ರಜ್ಞಾನವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವುದು ಈ ವಿಷನ್‌ನ ಗುರಿಯಾಗಿದೆ. ನಾವು ಏಕಕಾಲದಲ್ಲಿ ಸಾಧನದ ಬೆಲೆ, ಡಿಜಿಟಲ್ ಸಂಪರ್ಕ, ಡೇಟಾದ ವೆಚ್ಚ ಮತ್ತು ‘ಡಿಜಿಟಲ್ ಫಸ್ಟ್’ ಕಲ್ಪನೆಯತ್ತ ಗಮನ ಕೇಂದ್ರೀಕರಿಸಿದ್ದೇವೆ. ಸ್ವಾಭಾವಿಕವಾಗಿ ಈ ಎಲ್ಲಾ ಪ್ರಯತ್ನಗಳು ಸಾಧನದ ವೆಚ್ಚದ ಮೇಲೆ ಪ್ರಭಾವ ಬೀರಿವೆ. ಈಗ ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲು ಪ್ರಾರಂಭಿಸಿದ್ದೇವೆ. ಮನೆ ಮನೆಗೆ ವಿದ್ಯುತ್ ತಲುಪಿಸುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ಹರ್ ಘರ್ ಜಲ ಅಭಿಯಾನದ ಮೂಲಕ ಎಲ್ಲರಿಗೂ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಕೆಲಸ ಮಾಡಿದೆ. ಉಜ್ವಲಾ ಯೋಜನೆಯ ಮೂಲಕ ಬಡವರ ಬಡವರಿಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ. ಅದೇ ರೀತಿ, ನಮ್ಮ ಸರ್ಕಾರವು ಎಲ್ಲರಿಗೂ ಇಂಟರ್ನೆಟ್ ನೀಡುವ ಗುರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದ್ದಾರೆ.

ಬೆರಳೆಣಿಕೆಯಷ್ಟು ಗಣ್ಯ ವರ್ಗದ ಜನರು ಬಡವರ ಸಾಮರ್ಥ್ಯವನ್ನು ಅನುಮಾನಿಸುತ್ತಿದ್ದ ಸಮಯವಿತ್ತು. ಬಡವರಿಗೆ ಡಿಜಿಟಲ್ ಅರ್ಥವೂ ಅರ್ಥವಾಗುವುದಿಲ್ಲ ಎಂದು ಅವರು ಅನುಮಾನ ಪಟ್ಟಿದ್ದಾರೆ. ಆದರೆ ದೇಶದ ಜನಸಾಮಾನ್ಯರ ತಿಳುವಳಿಕೆ, ಅವರ ಆತ್ಮಸಾಕ್ಷಿಯ ಬಗ್ಗೆ ನನಗೆ ಯಾವಾಗಲೂ ನಂಬಿಕೆಯಿದೆ. ಸರ್ಕಾರವೇ ಮುಂದೆ ಹೋಗಿ ಡಿಜಿಟಲ್ ಪಾವತಿಗೆ ದಾರಿ ಮಾಡಿಕೊಟ್ಟಿತು. ಸರ್ಕಾರವೇ ಆ್ಯಪ್ ಮೂಲಕ ನಾಗರಿಕ ಕೇಂದ್ರಿತ ವಿತರಣಾ ಸೇವೆಯನ್ನು ಉತ್ತೇಜಿಸಿದೆ. ರೈತರಾಗಿರಲಿ ಅಥವಾ ಸಣ್ಣ ಅಂಗಡಿಯವರಾಗಿರಲಿ ಅವರ ದೈನಂದಿನ ಅಗತ್ಯಗಳನ್ನು ಅಪ್ಲಿಕೇಶನ್ ಮೂಲಕ ಪೂರೈಸಲು ನಾವು ಅವರಿಗೆ ದಾರಿ ಹಾಕಿಕೊಟ್ಟಿದ್ದೇವೆ. ಅದನ್ನು ಅವರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂದು ಸಣ್ಣ ಅಂಗಡಿ, ಬೀದಿ ಬದಿಯ ವ್ಯಾಪಾರಿಗಳ ಬಳಿಯೂ ಯುಪಿಐ ಪೇಮೆಂಟ್ ವ್ಯವಸ್ಥೆ ಲಭ್ಯವಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!