ಮಂಗಳೂರು: ಸುರತ್ಕಲ್ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಜಲೀಲ್ ಹತ್ಯೆ ಪ್ರಕರಣದ ಪ್ರಮುಖ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಾಪುರ 4ನೇ ಬ್ಲಾಕಿನ ಲಕ್ಷ್ಮೀಶ ದೇವಾಡಿಗ (28) ಬಂಧಿತ ಆರೋಪಿಯಾಗಿದ್ದಾನೆ. ಜಲೀಲ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 4ಕ್ಕೇರಿಕೆಯಾಗಿದೆ.
ನಿನ್ನೆ ಬಂಧಿಸಲ್ಪಟ್ಟ ಮೂವರು ಪ್ರಮುಖ ಆರೋಪಿಗಳಾದ ಕೃಷ್ಣಾಪುರ ನೈತಂಗಡಿಯ ಶೈಲು ಯಾನೆ ಶೈಲೇಶ್ ಪೂಜಾರಿ , ಹೆಜಮಾಡಿ ಎನ್.ಎಸ್.ರೋಡ್ನ ಸವಿನ್ ಕಾಂಚನ್ ಯಾನೆ ಮುನ್ನ ಮತ್ತು ಕಾಟಿಪಳ್ಳ ಮೂರನೇ ಬ್ಲಾಕ್ಲ್ನ ಪವನ್ ಯಾನೆ ಪಚ್ಚು ಈಗಾಗಾಲೇ 10 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ಪ್ರಗತಿಯಲ್ಲಿದೆ. ಹಿಂದೂ ಮಹಿಳೆಯ ವಿಚಾರವಾಗಿ ಜಲೀಲ್ ಕೊಲೆಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಿಂದ ನಿಜಾಂಶ ಬಯಲಿಗೆಬರಬೇಕಾಗಿದೆ. ಘಟನೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುರತ್ಕಲ್, ಕಾವೂರು, ಬಜಪೆ ಮತ್ತು ಪಣಂಬೂರು ಪ್ರದೇಶಗಳಲ್ಲಿ ಡಿಸೆಂಬರ್ 29ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ವಿಧಿಸಲಾಗಿದೆ.