ಮಂಗಳೂರು: ಇಲ್ಲಿನ ಶ್ರೀ ಉಲ್ಕಾ ಮೀನು ಕಾರ್ಖಾನೆ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕಂಪೆನಿ ಪರಿಹಾರ ಧನ ನೀಡೋವರೆಗೂ, ಮೃತ ದೇಹ ಕಳುಹಿಸಿಕೊಡಲು ಸಮ್ಮತಿ ನೀಡಲಾಗುವುದಿಲ್ಲ ಎಂದು ಡಿ.ವೈ.ಎಫ್.ಐ, ಸಿಐಟಿಯು ನಾಯಕರು ಬೇಡಿಕೆ ಮುಂದಿಟ್ಟ ಪರಿಣಾಮ ಹಲವು ಹಂತಗಳ ಮಾತುಕತೆಯ ನಂತರ ಕಂಪೆನಿ ಪ್ರತಿಯೊಂದು ಕುಟುಂಬಕ್ಕೆ ತಲಾ 15 ಲಕ್ಷ ರೂ.ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ.
ಹದಿನೈದು ದಿನಗಳಲ್ಲಿ ಕುಟುಂಬದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದಾಗಿ ಲಿಖಿತವಾಗಿ ಕುಟುಂಬದ ಸದಸ್ಯರಿಗೆ ಪತ್ರ ನೀಡಿದೆ. ಮಾತುಕತೆಯ ಸಂದರ್ಭ ಕುಟುಂಬ ಸದಸ್ಯರ ಜೊತೆಗೆ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಬಿಕೆ ಇಮ್ಮಿಯಾಝ್, ಮನೋಜ್ ಉರ್ವಸ್ಟೋರ್, ಪ್ರಶಾಂತ್ ಎಮ್.ಬಿ, ಬಜ್ಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಾಲಿ ಮರವೂರು ಮತ್ತಿತರರು ಉಪಸ್ಥಿತರಿದ್ದರು.
ಬಂಗಾಳ ಸರಕಾರ ಮೃತ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಧನ ಘೋಷಿಸಿದೆ. ಕರ್ನಾಟಕ ಸರಕಾರ ತಲಾ ಹತ್ತು ಲಕ್ಷ ರೂ. ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ. ಇಷ್ಟು ದೊಡ್ಡ ದುರಂತ ನಡೆದು ಸಾವು ನೋವು ಸಂಭವಿಸಿದರೂ ಸ್ಥಳೀಯ ಜನಪ್ರತಿನಿಧಿಗಳು ಕನಿಷ್ಟ ಸ್ಥಳಕ್ಕೆ ಭೇಟಿಯನ್ನೂ ನೀಡದಿರುವುದು ದುರದೃಷ್ಟಕರ ಎಂದು ಸಂಘಟಕರು ತಿಳಿಸಿದ್ದಾರೆ.