ಮಂಗಳೂರು: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಯ ರೋಗಿಗಳ ಸಹಾಯಕರಿಗೆ ರಾತ್ರಿಯ ಭೋಜನ ನೀಡಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಲಯನ್ಸ್ ಕ್ಲಬ್ ವಿಟ್ಲ 75ನೇ ಸ್ವಾತಂತ್ರ್ಯೋತ್ಸವವನ್ನು ಇಂದು ಸಂಜೆ ವಿಶಿಷ್ಟ ರೀತಿಯಲ್ಲಿ ಆಚರಿಸಿ ಸುದ್ದಿಯಾಗಿದೆ.
ಮಂಗಳೂರಿನಲ್ಲಿರುವ ಸರಕಾರಿ ವೆನ್ಲಾಕ್ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಲೇಡಿಗೋಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 500 ಮಂದಿ ರೋಗಿಗಳ ಸಹವರ್ತಿಗಳಿಗೆ ರಾತ್ರಿಯ ಭೋಜನ, ಪಾಯಸ, ಬಾಳೆಹಣ್ಣು ನೀಡುವ ಮೂಲಕ ನೊಂದವರ ಧ್ವನಿಯಾಗಿದೆ. ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಕಾರುಣ್ಯ ಯೋಜನೆಗೆ ವಿಟ್ಲ ಲಯನ್ಸ್ ಕ್ಲಬ್ ಸಹಯೋಗ ನೀಡಿದೆ.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಪ್ರಾಂತ್ಯ 1ರ ಪ್ರಾಂತ್ಯಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ಸುದೇಶ್ ಭಂಡಾರಿ, ರವೀಶ್ ವಿಟ್ಲ, ಎಡ್ವಕೇಟ್ ಎ.ಪಿ ಮೊಂತೇರೊ, ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಸದಸ್ಯ ಮಹಮ್ಮದ್ ಟಿ.ಕೆ ಮತ್ತು ಉಬೈದ್ ವಿಟ್ಲ ಬಝಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.