


ಮಾಣಿಲ: ODF + ಗ್ರಾಮ ರೂಪಿಸಲು ಗ್ರಾಮದ ಜನರು ಸಹಕರಿಸಬೇಕು. ಶೌಚಾಲಯ ನಿರ್ವಹಣೆ, ಸಮುದಾಯ ಶೌಚಾಲಯ ಬಳಕೆ, ಘನತ್ಯಾಜ್ಯ ನಿರ್ವಹಣೆ ಹಾಗೂ ದ್ರವತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಂಡು ಸ್ವಚ್ಛ ಗ್ರಾಮ ಪರಿಸರವನ್ನು ರೂಪಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇದರ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಡೊಂಬಯ್ಯ ಇಡ್ಕಿದು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ ಪಂಚಾಯತಿ ಯನ್ನು ODF + ಘೋಷಿಸುವ ಕುರಿತಾಗಿ ನಡೆದ ತರಬೇತಿ ಕಾರ್ಯಾಗಾರ ದಲ್ಲಿ ಮಾತನಾಡಿದರು. ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳುವ ಮೂಲಕ ಗ್ರಾಮವನ್ನು ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ರೂಪಿಸಲು ಗ್ರಾಮ ಪಂಚಾಯತ್ ಗಳು ಮುಂದಾಗಬೇಕು.

ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ.ಗಳದ್ದು. ಯೋಜನೆಯಡಿಯಲ್ಲಿ ಗ್ರಾ.ಪಂ. ಮಟ್ಟದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಗ್ರಾ.ಪಂ. ಸದಸ್ಯರು ಮುತುವರ್ಜಿ ವಹಿಸಿದರೆ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ಯೋಜನೆಯಿಂದ ದೊರೆಯುವ ಸವಲತ್ತುಗಳನ್ನು ತಿಳಿಸಿ ಅಂಥವರಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ. ಸದಸ್ಯರದ್ದು. ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕಾದರೆ ಜನಪ್ರತಿನಿಧಿಗಳ ಸಹಕಾರ ಮತ್ತು ಮುತುವರ್ಜಿ ಅತೀ ಅಗತ್ಯ.

ಈ ಯೋಜನೆಯ ಬಗ್ಗೆ ಜನಪ್ರತಿನಿಧಿಗಳಲ್ಲಿ ಸಂದೇಹಗಳು, ಗೊಂದಲಗಳು ಹಾಗೂ ಮಾಹಿತಿಯನ್ನು ನೀಡುವ ಉದ್ದೇಶವನ್ನು ಜಿಲ್ಲಾ ಪಂಚಾಯತ್ ಹೊಂದಿದೆ. ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಹಾಗೂ ಕೃಷಿ ಮತ್ತು ಸಂಬಂಧಿತ ಕಾರ್ಯಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಆದ್ದರಿಂದ ಪ್ರತೀ ಗ್ರಾ.ಪಂ.ನಲ್ಲಿ ವೈಯಕ್ತಿಕ ನರೇಗಾ ಯೋಜನೆಯಡಿ ಸೋಕ್ ಪಿಟ್ , ಸಮುದಾಯ ಸೋಕ್ ಪಿಟ್ ನಿರ್ಮಾಣ, ಮಲತ್ಯಾಜ್ಯ ನಿರ್ವಹಣೆ ಗೆ ಆದ್ಯತೆ ನೀಡಲಾಗುವುದು. ಎಂದರು.

ತಾಲೂಕಿನಲ್ಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನು ಪಿಪಿಟಿ, ವೀಡಿಯೋ ಮೂಲಕ ತೋರಿಸಿ, ವಿವರಿಸಲಾಯಿತು. ಬಳಿಕ ಸದಸ್ಯರೊಂದಿಗೆ ಸಂವಾದ ನಡೆಯಿತು. ಯೋಜನೆಯ ಬಗ್ಗೆ ಸದಸ್ಯರಲ್ಲಿದ್ದ ಗೊಂದಲಗಳನ್ನು ನಿವಾರಿಸಲಾಯಿತು.

ಗ್ರಾಮದಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕುರಿತು ಕಸವಿಲೇವಾರಿವ ಪ್ರಕ್ರಿಯೆ ಕೂಡಲೇ ಆರಂಭಿಸುವುದ ಗ್ರಾ.ಪಂ. ಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇಜಪ್ಪ ಯವರು ಸ್ವಾಗತಿಸಿದರು. ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.










