ಉದ್ಯಾನನಗರಿ ಬೆಂಗಳೂರಿನಲ್ಲಿ ಕರಾವಳಿಯ ಯುವಕರು ಸೇರಿಕೊಂಡು ಕಟ್ಟಿಕೊಂಡ ತುಳುನಾಡ ಜವನೆರ್ (ರಿ)ನಿಂದ ಆಗಸ್ಟ್ 28 ನೇ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಹತ್ತು ಹಲವು ತುಳು ಆಚಾರ ವಿಚಾರಗಳ ಕಾರ್ಯಕ್ರಮಗಳು, ಆಟೋಟಗಳು ಗಮನ ಸೆಳೆದವು. ವಿಘ್ನವಿನಾಯಕನ ಮೊದಲು ಪೂಜಿಸಿ ಭಜನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಚಾಲನೆ ನೀಡಲಾಯಿತು.
ಮಕರಶ್ರೀ ಹಾಗೂ ಶ್ರೀವಿನಾಯಕ ಭಜನಾ ಮಂಡಳಿಯ ಸಂಕೀರ್ತನೆ ಭಕ್ತಿಲೋಕಕ್ಕೆ ಕರೆದೊಯ್ದಿತು. ಶ್ರೀ ಉದಯ ಧರ್ಮಸ್ಥಳ ವೇದಿಕೆಯಲ್ಲಿ ಸಚಿವ ಸುನಿಲ್ ಕುಮಾರ್ ಹಾಗೂ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ದೀಪ ಪ್ರಜ್ವಲನೆಯ ಜೊತೆಗೆ ಪುಟ್ಟ ಕೃಷ್ಣರಿಗೆ ಬೆಣ್ಣೆ ತಿನ್ನಿಸುವ ಮೂಲಕ ಚಾಲನೆಯಾಯಿತು.
ಕ್ರೀಡಾಂಗಣದಲ್ಲಿ ಮುದ್ದುರಾಧಾಕೃಷ್ಣ, ಲಿಂಬೆ ಚಮಚ, ಗೋಣಿಚೀಲ ಓಟ, ಮಡಕೆ ಒಡೆಯುವ ಸ್ಪರ್ಧೆ, ಅಡ್ಡ ಜಾರು ಕಂಬ, ತುಳು ರಸಪ್ರಶ್ನೆ, ಘಟಾನುಘಟಿ ತಂಡಗಳ ಹಗ್ಗಜಗ್ಗಾಟ ಆಕರ್ಷಣೆಯ ಕೇಂದ್ರವಾಗಿತ್ತು.
ಮಂಗಳೂರಿನ ಪ್ರಸಿದ್ದ ತಂಡದ ಪಿಲಿವೇಷ, ಕಂಗೀಲು ಕುಣಿತ, ನೃತ್ಯ ಚೆಂಡೆ, ಮೊಸರು ಕುಡಿಕೆ ಕಣ್ಮನ ಸೆಳೆಯಿತು. ರಂಗವೇದಿಕೆಯಲ್ಲಿ ನರಕಾಸುರ ಮೋಕ್ಷ ಯಕ್ಷಗಾನ, ತುಳುನಾಡ ಪ್ಯಾಶನ್ ಶೋ, ಮಹಿಷಾಸುರ ಮರ್ಧಿನಿ ಯಕ್ಷನಾಟ್ಯ ಜುಗಲ್ ಬಂಧಿ, ನಿತ್ಯೆ ಬನ್ನಗ ನಾಟಕ ಕಲಾ ರಸಿಕರಿಗೆ ರಸದೌತಣ ನೀಡಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬರೋಡ ಶಶಿಧರ್ ಶೆಟ್ಟಿ, ಗುಣರಂಜನ್ ಶೆಟ್ಟಿ, ಪ್ರಶಾಂತ್ ಕೈಕಾರ, ಅರ್ಜುನ್ ಕಾಪಿಕಾಡ್, ಪುರುಷೋತ್ತಮ ಚೇಂಡ್ಲ, ಮುರಳೀಧರ ಹೆಗ್ಡೆ, ಶಿವದ್ವಜ್, ಉಪೇಂದ್ರ ಶೆಟ್ಟಿ, ಕಾರ್ಪೋರೇಟರ್ ಉಮೇಶ್ ಶೆಟ್ಟಿ, ಡಾ.ಅರುಣ್ ಉಳ್ಳಾಲ್, ಗೌರವಾಧ್ಯಕ್ಷರಾದ ಉತ್ತಮ್ ಶೆಟ್ಟಿ ಬೇಂಗದಡಿ, ಅಧ್ಯಕ್ಷ ಮಹೇಶ್ ಬೈಲೂರು, ಇನ್ನಿತರರು ಹಾಜರಿದ್ದರು.
ತುಳುನಾಡ ಸಾಧಕರಿಗೆ ಐಸಿರ ಸನ್ಮಾನ ನೆರವೇರಿತು. ಇಡೀ ಬಂಟರ ಸಂಘದ ಆವರಣ ತುಳುನಾಡ ನೆನಪಿನ ಕಂಪನ್ನು ಸೂಸಿ ಕಂಗೊಳಿಸುತಿತ್ತು. ಸುಮಾರು 5000 ಕ್ಕೂ ಅಧಿಕ ಬೆಂಗಳೂರಿನ ತುಳುವರು ಭಾಗವಹಿಸಿದ್ದು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.