ಕಣ್ಣೂರು: ರೈಲ್ವೆ ಕ್ರಾಸಿಂಗ್ ದಾಟುವಾಗ ಬಹಳ ಎಚ್ಚರಿಕೆ ಇರಬೇಕು. ಕ್ರಾಸಿಂಗ್ ಬಳಿ ಸೂಚನಾ ಫಲಕವನ್ನು ಅಳವಡಿಸಲಾಗಿರುತ್ತದೆ. ಆದರೆ, ಅದನ್ನು ಗಮನಿಸದೆ ಮೈಮರೆತು ಕ್ರಾಸಿಂಗ್ ದಾಟಿದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಕೇರಳದ ಕಣ್ಣುರಿನಲ್ಲಿ ನಡೆದಿದೆ. ಈ ದುರ್ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಂದಿತಾ ಕಿಶೋರ್ ಮೃತಪಟ್ಟ ವಿದ್ಯಾರ್ಥಿನಿ. ಈ ದುರಂತ ಕಣ್ಣೂರಿನ ಕಕ್ಕಾಡ್ ಬಳಿ ನಡೆದಿದೆ. ಕ್ರಾಸಿಂಗ್ ಮುಂದೆ ಕಾರಿನಲ್ಲಿ ಇಳಿದ ವಿದ್ಯಾರ್ಥಿನಿ ಇನ್ನೊಂದು ಬದಿಯಲ್ಲಿ ನಿಂತಿದ್ದ ಶಾಲಾ ಬಸ್ ಏರಲು ತರಾತುರಿಯಲ್ಲಿ ಕ್ರಾಸಿಂಗ್ ದಾಟುವಾಗ ಮಿಂಚಿನ ವೇಗದಲ್ಲಿ ಬಂದ ಪರುಶುರಾಮ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.
ಪ್ರತ್ಯಕ್ಷದರ್ಶಿ ಒಬ್ಬರು ಹೇಳುವ ಪ್ರಕಾರ ನಂದಿತಾ ರೈಲ್ವೆ ಕ್ರಾಸಿಂಗ್ ದಾಟಿದ್ದಳು. ಆದರೆ, ಆಕೆಯ ಬ್ಯಾಗ್ ರೈಲಿಗೆ ಸಿಲುಕಿದ್ದರಿಂದ ರೈಲಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ದುರಂತದ ಸಂಗತಿಯೆಂದರೆ, ನಂದಿತಾ ರೈಲಿಗೆ ಸಿಲುಕಿದಾಗ ಆಕೆಯ ತಾಯಿ ಮತ್ತೊಂದು ರೈಲು ದ್ವಾರದ ಬಳಿ ನಿಂತಿದ್ದರು. ಕಣ್ಣ ಎದುರಲ್ಲೇ ಮಗಳ ದುರ್ಮರಣವು ತಾಯಿಯ ಮನಸ್ಸನ್ನು ನುಚ್ಚು ನೂರು ಮಾಡಿದೆ. ಅಪಘಾತದ ಬೆನ್ನಲ್ಲೇ ಹತ್ತಿರ ಓಡಿ ಬಂದ ಸ್ಥಳೀಯರು ನಂದಿತಾಳನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವರ್ಷಗಳ ಹಿಂದೆಯಷ್ಟೇ ಅನಾರೋಗ್ಯದಿಂದ ತಂದೆ ಕಿಶೋರ್ ಸಾವನ್ನಪ್ಪಿದ್ದರು.