ವಿಟ್ಲ : ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕುಡುಕನೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.
ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್ ಗಣೇಶ್ ಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ಕಳೆದ ರಾತ್ರಿ ನವೀನ್ ಅವರ ಮನೆಯ ಮುಂದೆ ನಿಂತು ಬೊಬ್ಬೆಹಾಕುತ್ತಿದ್ದು, ನಿನ್ನೆ ಸುಮಾರು ಸಂಜೆ 4.50ರ ಹೊತ್ತಿಗೆ ನವೀನ್ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇದ್ದ ವೇಳೆ ಈ ಕುಡುಕ ಏಕಾಏಕಿ ಮನೆಯೊಳಗೆ ನುಗ್ಗಿ, ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಗಾಬರಿಗೊಂಡ ಮಹಿಳೆ ಬೊಬ್ಬೆ ಹೊಡೆದು ಮನೆಯ ರೂಂ ಗೆ ಮಕ್ಕಳೊಂದಿಗೆ ಓಡಿ ಹೋಗಿ, ತನ್ನ ಗಂಡನಿಗೆ ಫೋನ್ ಮುಖಾಂತರ ವಿಷಯ ತಿಳಿಸಿದ್ದಾರೆ. ಈ ವೇಳೆ ನವೀನ್ ತನ್ನ ಆಸುಪಾಸಿನವರಿಗೆ ಫೋನ್ ಮುಖಾಂತರ ವಿಚಾರ ತಿಳಿಸಿದ್ದಾರೆ. ನೆರೆಹೊರೆಯವರು ಈತನ ಬಳಿ ಧಾವಿಸುವುದನ್ನು ಕಂಡ ಈತ ನವೀನ್ ಅವರಿಗೆ ಜೀವ ಬೆರಿಕೆ ಹಾಕಿ ಹೊರಟು ಹೋಗುತ್ತಿದ್ದ ವೇಳೆ ಸಾರ್ವಜನಿಕರು ಈತನನ್ನು ವಶಕ್ಕೆ ಪಡೆದುಕೊಂಡು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಈ ಬಗ್ಗೆ ಆರೋಪಿ ಗಣೇಶ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಗಣೇಶ್ ಶೆಟ್ಟಿ ವಿಟ್ಲ ಪರಿಸರದಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಪ್ರತೀ ದಿನ ಕುಡಿದ ಮತ್ತಿನಲ್ಲೇ ಜಾಲಾಡ್ತಾ ಇರುತ್ತಾನೆ. ಈ ಹಿಂದೆಯೂ ಅನೇಕ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಹಿನ್ನಲೆ ಸಾರ್ವಜನಿಕರಿಂದ ಗೂಸಾ ತಿಂದಿದ್ದರೂ ನಾಯಿ ಬಾಲ ಡೊಂಕು ಎಂಬಂತೆ ತನ್ನ ಛಾಳಿ ಬುದ್ದಿಯನ್ನು ಇನ್ನೂ ಬಿಟ್ಟಿಲ್ಲ. ಕಳೆದ ರಾತ್ರಿಯಲ್ಲಿ ಕುಡಿದ ಮತ್ತಿನಲ್ಲಿ ರಿಕ್ಷಾವನ್ನು ಅಡ್ಡಾ-ದಿಡ್ಡಿ ಚಲಾಯಿಸುತ್ತಿದ್ದ ಎಂಬ ಮಾಹಿತಿ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಒಂದೊಂದು ವಿಚಾರವಾಗಿ ಸಾರ್ವಜನಿಕರು ಹಾಗೂ ಪೊಲೀಸರಿಂದ ಧರ್ಮದೇಟು ತಿನ್ನುತ್ತಾ ಬದುಕುತ್ತಿರುವ ಈತನಿಗೆ ಪೊಲೀಸ್ ಠಾಣೆ, ಸಾರ್ವಜನಿಕರ ಗೂಸಾ ಇದ್ಯಾವುದೂ ಹೊಸತೇನಲ್ಲ.