ವಿಟ್ಲ: ಖಾಸಗಿ ಪದವಿಪೂರ್ವ ಕಾಲೇಜಿನ ಹಿಂದು ಯುವತಿ ಹಾಗೂ ಮುಸ್ಲಿಂ ಯುವಕನ ನಡುವಿನ ಪ್ರೇಮ ಪ್ರಕರಣದಲ್ಲಿ ಸಹಕರಿಸಿದ ಹಾಗೂ ವಿವಾದ ಎಬ್ಬಿಸಲು ಪ್ರಯತ್ನಿಸಿದ ಸುಮಾರು 18 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿರುವ ಬಗ್ಗೆ ವರದಿಯಾಗಿದೆ. ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಪೋಷಕರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮುಂಜಾಗರೂಕತ ಕ್ರಮವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದು ಯುವತಿ ಹಾಗೂ ಮುಸ್ಲಿಂ ಯುವಕನ ನಡುವೆ ಪ್ರೇಮ ಪ್ರಕರಣವಿರುವ ಬಗ್ಗೆ ಸುದ್ದಿಗಳು ಹಬ್ಬಿ ಅದು ಕಾಲೇಜು ಆಡಳಿತ ವರ್ಗದ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಈ ವಿಚಾರವನ್ನು ಕಾಲೇಜ್ ವತಿಯಿಂದ ಇಬ್ಬರು ವಿದ್ಯಾರ್ಥಿಗಳ ಪೋಷಕರುಗಳ ಗಮನಕ್ಕೂ ತರಲಾಗಿತ್ತು ಎಂದು ತಿಳಿದು ಬಂದಿದೆ. ಪೋಷಕರನ್ನು ಕಾಲೇಜಿಗೆ ಕರೆಸಿ ವಿಚಾರವನ್ನು ತಿಳಿಸಲಾಗಿತ್ತು. ಇದಾದ ಬಳಿಕ ಕೆಲ ಸಮಯಗಳ ಕಾಲ ಈ ಪ್ರೇಮ ಪ್ರಕರಣದ ವಿಚಾರವಾಗಿ ಯಾವುದೇ ಗೊಂದಲಗಳು ಉಂಟಾಗಿರಲಿಲ್ಲ.
ಕಾಲೇಜು ವಾರ್ಷಿಕೋತ್ಸವದ ಸಮಯ ಮತ್ತೆ ಈ ಪ್ರೇಮ ಪ್ರಕರಣ ಮುನ್ನಲೆಗೆ ಬಂದು, ಈ ವಿಚಾರದ ಕುರಿತಾಗಿ ಕಾಲೇಜ್ ಕ್ಯಾಂಪಸಿನಲ್ಲಿ ಚರ್ಚೆಗಳು ಆರಂಭವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಉಪನ್ಯಾಸಕರ ತಂಡ ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ಹಿಂದು ಯುವತಿಯ ಬ್ಯಾಗ್ನಲ್ಲಿ ಪ್ರೇಮ ಪತ್ರ ಪತ್ತೆಯಾಗಿತ್ತು. ಆ ದಿನ ಮುಸ್ಲಿಂ ಯುವಕ ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೋಷಕರಲ್ಲಿ ಮಾತುಕತೆ ನಡೆಸಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಯುವತಿಯನ್ನು ಪರೀಕ್ಷೆಗೆ ಮಾತ್ರ ಆಗಮಿಸುವಂತೆ ಸೂಚನೆ ನೀಡಿದರು.
ಮುಸ್ಲಿಂ ಯುವಕ ತರಗತಿಗೆ ಹಾಜರಾಗುತ್ತಿದ್ದಂತೆ ಉಪನ್ಯಾಸಕರುಗಳಿಗೆ ಮಾಹಿತಿ ನೀಡದೆ ಕೆಲವು ಹಿಂದು ಯುವಕರು ಗುಂಪು ಕಟ್ಟಿಕೊಂಡು ಹೋಗಿ ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಸ್ಲಿಂ ಯುವಕ ಹಾಗೂ ಆತನಿಗೆ ಸಹಕಾರ ಮಾಡಿದ 6 ಮಂದಿ ಮುಸ್ಲಿಂ ಯುವಕ ಯುವತಿಯರನ್ನು ಹಾಗೂ ಗುಂಪು ಕಟ್ಟಿಕೊಂಡು ಪ್ರಶ್ನಿಸಲು ಹೋದ ಹಿಂದು ಯುವಕರನ್ನು ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ದಿಟ್ಟ ನಿರ್ಧಾರಕ್ಕೆ ಪ್ರಶಂಸೆಗಳು ಕೇಳಿ ಬರುತ್ತಿದೆ.
ಅಮಾನತು ವಾಪಸ್ಸಿಗೆ ಹಿಂಜಾವೇ ಆಗ್ರಹ
ಏತನ್ಮಧ್ಯೆ ಈ ವಿಚಾರವಾಗಿ 18 ಹಿಂದೂ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ ಇದು ಅತ್ಯಂತ ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಆಕ್ರೋಶ ವ್ಯಕ್ತಪಡಿಸಿದೆ. ಪ್ರಾಂಶುಪಾಲರು ತಕ್ಷಣ ಅಮಾನತು ವಾಪಸು ತೆಗೆದುಗೊಳ್ಳಬೇಕು ಹಾಗೂ ಇದಕ್ಕೆ ಕಾರಣೀಕರ್ತರಾದ ಇಬ್ಬರು ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ಕ್ರಮ ಜರಗಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.