ಜನರ ವಿರೋಧ ತಿರಸ್ಕರಿಸಿದರೆ ತಕ್ಕ ಹೋರಾಟ ನಡೆಸಲು ಗ್ರಾಮಸ್ಥರ ಎಚ್ಚರಿಕೆ.!!
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 15ನೇ ವಾರ್ಡಿನ ಆವೆತ್ತಿಕಲ್ ಎಂಬಲ್ಲಿನ ಸ.ನಂ. 1ರಲ್ಲಿ ಮೂರು ಕೋಟಿ ವೆಚ್ಚದಲ್ಲಿ ಮಾನವ ತ್ಯಾಜ್ಯ ಘಟಕ ನಿರ್ಮಿಸಲು ಈಗಾಗಲೇ ಸರ್ವೆಕಾರ್ಯ ಪೂರ್ಣಗೊಂಡಿದೆ.
ಸ್ಥಳೀಯರಿಗೆ ತಿಳಿಯದಂತೆ ಗುಟ್ಟಾಗಿ ಸರ್ವೆಕಾರ್ಯ ಪೂರ್ಣಗೊಂಡಿದೆ ಅಂತಾ ಸ್ಥಳೀಯರ ಆರೋಪವಾಗಿದೆ. ಆವೆತ್ತಿಕಲ್, ಸುದೆಕಟ್ಟೆಮಾರು, ನಡುಮನೆ, ಪುಂಜಾವೆ, ಹಿರ್ತಂಡಬೈಲು, ನಚ್ಚಪಾಲು, ಪೊನ್ನೆತ್ತಡಿ, ಪಡೀಲು ಮತ್ತು ಇರಂದೂರು ಸುತ್ತಮುತ್ತ ನೂರೈವತ್ತಕ್ಕೂ ಹೆಚ್ಚು ಬಡಕುಟುಂಬಗಳು, ಸಣ್ಣಪುಟ್ಟ ರೈತರು ನೆಮ್ಮದಿಯ ಜೀವನ ನಡೆಸುತ್ತಿದ್ದು ತ್ಯಾಜ್ಯ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗನವಾಡಿ, ದೇವಸ್ಥಾನ, ದೈವಸ್ಥಾನ ಸೇರಿದಂತೆ ಇನ್ನಿತರ ಧಾರ್ಮಿಕ ಶ್ರದ್ಧಾಕೇಂದ್ರಗಳಿದ್ದು ತ್ಯಾಜ್ಯ ಘಟಕದಿಂದಾಗಿ ಜನರ ನೆಮ್ಮದಿಯ ಬದುಕು ಅತಂತ್ರವಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯರು ತಾವು ಈಗಾಗಲೇ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ಬಂಟ್ವಾಳ ತಹಶೀಲ್ದಾರ್, ವಿಟ್ಲ ಪಟ್ಟಣ ಪಂಚಾಯತ್,ಅರಣ್ಯ ಇಲಾಖೆ ಮತ್ತು ಶಾಸಕರಿಗೆ ತ್ಯಾಜ್ಯ ಘಟಕ ಸ್ಥಾಪನೆ ಮಾಡದಂತೆ ಆಕ್ಷೇಪಣೆ ಸಲ್ಲಿಸಿದ್ದೇವೆ. ತಮ್ಮ ವಿರೋಧದ ನಡುವೆಯೂ ತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಅಧಿಕಾರಿಗಳು ಮುಂದಾದಲ್ಲಿ ತೀವ್ರ ಹೋರಾಟದ ಜೊತೆಗೆ ಕಾನೂನು ಹೋರಾಟ ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.