ವಿಟ್ಲ: ಅಗತ್ಯ ವಸ್ತುಗಳ ಮತ್ತು ಇಂಧನಗಳ ಬೆಲೆ ಏರಿಕೆ ವಿರುದ್ಧ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿ ಪಿ ಐ) ವಿಟ್ಲ ಪಟ್ಟಣ ಪಂಚಾಯಿತಿ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮುಖಂಡ ಇಬ್ರಾಹಿಂ ಸಾಗರ್ ಮಾತನಾಡಿ ದಿನೇ ದಿನೇ ಆಹಾರ ಪದಾರ್ಥಗಳಿಂದ ಹಿಡಿದು ಅನಿಲಗಳ ವರೆಗೂ ಬೆಲೆಯೇರಿಕೆಯಾಗಿದ್ದು, ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಉತ್ತಮ ಆಡಳಿತ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ತಮ್ಮ ದುರಾಡಳಿತವನ್ನು ಮರೆಮಾಚುವ ಉದ್ದೇಶದಿಂದ ಜನರ ನಡುವೆ ಜಾತಿ ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡಿ ತಾವು ಒಳ್ಳೆಯವರು ಎಂಬಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿದರು.
ವಿಟ್ಲ ನಾಡಕಚೇರಿಯಿಂದ ಹೊರಟ ಮೆರವಣಿಗೆ ವಿಟ್ಲ ಮುಖ್ಯ ರಸ್ತೆಯಲ್ಲಿ ಸಾಗಿದೆ. ಸಂತೆ ಮಾರುಕಟ್ಟೆ ಬಳಿ ಪ್ರತಿಭಟನಾ ಸಭೆ ನಡೆಯಿತು. ಈ ಸಂದರ್ಭ ಪ್ರಮುಖರಾದ ರಿಯಾಜ್ ಕಡಂಬು, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಯಾಡಿ, ಮೊಹಮ್ಮದ್ ರಫೀಕ್ ಪೊನ್ನೋಟ್ಟು, ಅನ್ಸರ್ ಪೆರುವಾಯಿ, ಅಬ್ದುಲ್ ರಹಿಮಾನ್ ಕಂಬಳಬೆಟ್ಟು, ಮುನೀರ್ ಪುಣಚ ಮೊದಲಾದವರು ಭಾಗವಹಿಸಿದ್ದರು.