ವಿಟ್ಲ: ತನ್ನ ಮದುವೆಯ ತಾಳ ಕಾರ್ಯಕ್ರಮದಲ್ಲಿ ತುಳುನಾಡಿನ ಅರಾಧ್ಯ ದೈವ ಕೊರಗಜ್ಜನ ಹೋಲುವ ವೇಷ ಧರಿಸಿದ ಪ್ರಕರಣದ ಪ್ರಮುಖ ಆರೋಪಿ ಮದುಮಗ ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ನ್ಯಾಯಾಲಯವು ತಿರಸ್ಕರಿಸಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮರುಲ್ ಭಾಷಿತ್ ಎಂ ಜಾಮೀನು ತಿರಸ್ಕೃತಗೊಂಡ ಆರೋಪಿ.
ಕಡಂಬು ನಿವಾಸಿ ಹಿಂದೂ ಜಾಗರಣೆ ವೇದಿಕೆ ತಾಲೊಕು ಕಾರ್ಯದರ್ಶಿ ಚೇತನರವರು ಆರೋಪಿಯ ವಿರುದ್ದ ದೂರು ನೀಡಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಬಂಧನ ಭೀತಿಯಲ್ಲಿದ್ದ ಆರೋಪಿಯು ನಿರೀಕ್ಷಣ ಜಾಮೀನು ಕೋರಿ ಮಂಗಳೂರಿನ ನಾಲ್ಕನೇ ಅಡಿಷನಲ್ ಸೇಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ. ಕೆಲ ದಿನಗಳ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಜ. 6 ರಂದು ಭಾಷಿತ್ ವಿವಾಹವು ಸಾಲೆತ್ತೂರು ಸಮೀಪದ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಪುತ್ರಿ ಜತೆ ಜರುಗಿತ್ತು. ಅದೇ ದಿನ ರಾತ್ರಿ ಮುಸ್ಲಿಂ ವಿವಾಹ ಸಂಪ್ರದಾಯದಂತೆ ವಧುವಿನ ಮನೆಗೆ ವರ ಭೇಟಿ ನೀಡುವ ತಾಳ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅದರಲ್ಲಿ ಪಾಲ್ಗೊಳ್ಳಲು ವರ ಹಾಗೂ ಆತನ ಹಲವು ಸ್ನೇಹಿತರು ಮದುಮಗಳ ಮನೆಗೆ ಆಗಮಿಸಿದ್ದರು.
ಈ ವೇಳೆ ವರನ ಸ್ನೇಹಿತರು ಆತನ ಮುಖಕ್ಕೆ ಕಪ್ಪು ಬಣ್ಣ ಬಳಿದು ಅಡಿಕೆ ಹಾಳೆಯ ಟೋಪಿ ತೊಡಿಸಿ ಹಾಡು ಹೇಳಿ ಕುಣಿಸಿದರು. ಮರುದಿನ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿತ್ತು. ಬಳಿಕ ಇದು ಬಲು ದೊಡ್ಡ ವಿವಾದ ಸ್ವರೂಪ ಪಡೆದು ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.