ವಿಟ್ಲ: ರಸ್ತೆ ವಿಸ್ತರಣೆ ಹಿನ್ನಲೆ ಹೆದ್ದಾರಿಯ ಪಕ್ಕದಲ್ಲಿರುವ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲು ಬಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ವೀರಕಂಬ ಗ್ರಾಮದ ಮಂಗಳಪದವು ಜಂಕ್ಷನ್ ನಲ್ಲಿ ನಡೆಯಿತು.
ವೀರಕಂಬದಿಂದ ವಿಟ್ಲ ವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ರಸ್ತೆಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಅದರಂತೆ ಮಂಗಳಪದವು ಪೇಟೆಯಲ್ಲಿ ಈ ಹಿಂದೆ ಅಕ್ರಮವಾಗಿ ಕಟ್ಟಲಾದ ಬಹುತೇಕ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಇನ್ನುಳಿದ ಅಂಗಡಿಗಳನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದ ತಂಡ ಆಗಮಿಸಿ ತೆರವುಗೊಳಿಸಲು ಒತ್ತಾಯಿಸಿದ್ದಾರೆ. ಇದಕ್ಕೆ ಅಂಗಡಿ ಮಾಲಕರು ವಿರೋಧ ವ್ಯಕ್ತಪಡಿಸಿದರು.
ಅಲ್ಲಿನ ಗೂಡಂಗಡಿಯ ವ್ಯಾಪಾರಿ ನಮ್ಮ ಅಂಗಡಿಗೆ ಪರವಾನಿಗೆ ಇದೆ ಎಂದು ಹೇಳಿದರು. ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ನನ್ನ ಅಂಗಡಿಗೆ ಗ್ರಾ.ಪಂ ಅನುಮತಿ ಇದೆ. ವಿದ್ಯುತ್ ಸಂಪರ್ಕವಿದ್ದು, ಅವುಗಳನ್ನು ಪಾವತಿಸುತ್ತಿದ್ದೇನೆ. ಈ ಅಂಗಡಿಯನ್ನು ನಂಬಿ ಬ್ಯಾಂಕ್ ನಿಂದ ಸಾಲ ಪಡೆದಿರುತ್ತೇನೆ. ಅಂಗಡಿ ತೆರವು ಮಾಡಿದರೆ ನಾನು ಬೀದಿ ಪಾಲಾಗುತ್ತೇನೆ ಎಂದು ಅಳಲು ವ್ಯಕ್ತಪಡಿಸಿದರು.
ವೀರಕಂಬ ಗ್ರಾ.ಪಂ ಅಧ್ಯಕ್ಷ ದಿನೇಶ್ ಪೂಜಾರಿ ಸ್ಪಷ್ಟನೆ ನೀಡಿ, ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಎಲ್ಲ ಅಕ್ರಮ ಅಂಗಡಿಗಳನ್ಬು ತೆರವುಗೊಳಿಸಲಾಗುತ್ತಿದೆ. ಪೇಟೆಯಲ್ಲಿ ಬಹುತೇಕ ಅಕ್ರಮ ಗೂಡಾಂಗಡಿ ತೆರವುಗೊಳಿಸಲಾಗಿದೆ. ಪೇಟೆಯಲ್ಲಿ ಎರಡು ಅಂಗಡಿಗಳು ತೆರವುಗೊಳಿಸಲು ಬಾಕಿಯಾಗಿತ್ತು. ಅದನ್ನು ಇಂದು ತೆರವುಗೊಳಿಸಲು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾ.ಪಂ ವತಿಯಿಂದ ಅಂಗಡಿ ನಿರ್ಮಿಸಿ, ಬಾಡಿಗೆಗೆ ಕೊಡಲಾಗುತ್ತದೆ ಎಂದರು. ಈ ವೇಳೆ ಪಿಡಿಓ ನಿಶಾಂತ್, ಗ್ರಾಂ ಪಂ ಸದಸ್ಯ ಸಂದೀಪ್ ಸೇರಿದಂತೆ ಹಲವರು ಸೇರಿದ್ದರು.