ಪುತ್ತೂರು: ವಿಟ್ಲ ಹಾಗೂ ಪುತ್ತೂರಿನಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ದಲಿತ ಸೇವಾ ಸಮಿತಿ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು .ವಿಟ್ಲ, ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ 17 ಸೆಂಟ್ಸ್ ಜಾಗ ಮಂಜೂರಾಗಿದೆ. ಆದರೆ, ಇದುವರೆಗೂ ಅಲ್ಲಿ ಯಾವುದೇ ರೀತಿಯ ಕಾಮಗಾರಿಯನ್ನು ಪ್ರಾರಂಭ ಮಾಡಿಲ್ಲ. ಹಾಗೆಯೇ ಪುತ್ತೂರಿನ ಬನ್ನೂರಿನಲ್ಲಿ 75 ಸೆಂಟ್ಸ್ ಜಾಗ ಅಂಬೇಡ್ಕರ್ ಭವನಕ್ಕೆ ಮಂಜೂರಾಗಿದೆ. ಆದರೆ, ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂದರು.
ವಿಟ್ಲದ ಅಂಬೇಡ್ಕರ್ ಭವನಕ್ಕೆ ಸುಮಾರು 50 ಲಕ್ಷ ಅನುದಾನವಿದೆ ಎಂಬ ಮಾಹಿತಿ ಇದೆ. ಆದರೆ, ಒಂದು ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕಾದರೆ 2 ಕೋಟಿ ಅನುದಾನ ಬೇಕು. ವಿಟ್ಲ ಮುಂದಿನ ದಿನಗಳಲ್ಲಿ ತಾಲೂಕು ಆಗುವ ಎಲ್ಲ ಲಕ್ಷಣಗಳಿವೆ. ಹಾಗಾಗಿ ದೊಡ್ಡ ಮಟ್ಟದ ಅಂಬೇಡ್ಕರ್ ಭವನದ ಅವಶ್ಯಕತೆ ಇದೆ ಎಂದರು.
ಪುತ್ತೂರು ಜಿಲ್ಲಾ ಕೇಂದ್ರವಾಗುವ ಮುನ್ಸೂಚನೆಗಳಿರುವುದರಿಂದ ಪುತ್ತೂರಿನಲ್ಲಿಯೂ ಸುಸಜ್ಜಿತವಾದ ಅಂಬೇಡ್ಕರ್ ಭವನದ ನಿರ್ಮಾಣವಾಗಬೇಕಿದೆ. ಪುತ್ತೂರಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಮಂಜೂರು ಮಾಡಬೇಕು ಅನ್ನೋದು ನಮ್ಮ ಬೇಡಿಕೆಯಾಗಿದೆ ಎಂದರು.