ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ, ವೀರಕಂಬ ಇಲ್ಲಿ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇದರ ಸಹಯೋಗದಲ್ಲಿ ಸಂಸಾರ ಕಲಾವಿದರು ಜೋಡುಮಾಗ೯ ತಂಡದಿಂದ ಆರೋಗ್ಯದ ಅರಿವಿನ ಬಗ್ಗೆ ಬೀದಿನಾಟಕ ನಡೆಯಿತು.
ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್ ಕೆಯವರು ತಮಟೆ ಬಾರಿಸುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿ. ಇಂತಹ ನಾಟಕಗಳ ಮೂಲಕ ಮಕ್ಕಳಲ್ಲಿ ಆರೋಗ್ಯದ ಅರಿವು ಮೂಡಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮ ಶಾಲೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ವಿಟ್ಲ ಆರೋಗ್ಯ ಕೇಂದ್ರಕ್ಕೆ ಅಭಿನಂದನೆ ತಿಳಿಸಿದರು.
ಸಂಸಾರ ಕಲಾತಂಡ ಜೋಡುಮರ್ಗ ಇದರ ಕಲಾವಿದರಾದ ಪತ್ರಕರ್ತ ಮೌನೇಶ್ ವಿಶ್ವಕರ್ಮ, ಭವಾನಿ, ಅಶೋಕ್, ಪತ್ರಕರ್ತ ವಿಷ್ಣುಗುಪ್ತ ಪುಣಚ, ಪೃಥ್ವಿರಾಜ್ ರವರು ಕರೋನದ ಮುನ್ನೆಚ್ಚರಿಕೆ ಕ್ರಮಗಳು, ಕ್ಷಯರೋಗದ ಲಕ್ಷಣಗಳು, ಗರ್ಭಿಣಿಯರ ಆರೋಗ್ಯ, ತಾಯಿಕಾಡ್೯ ,ಸಾಂಕ್ರಾಮಿಕ ರೋಗಗಳು, ಕಿವುಡುತನ ಮುಂತಾದ ಕುರಿತು ನಾಟಕ ಪ್ರದರ್ಶಿಸಿ .ಆರೋಗ್ಯದ ವಿಷಯವನ್ನು ಅತ್ಯಂತ ಅರ್ಥಗರ್ಭಿತವಾಗುವಂತೆ ತಿಳಿಸಿದರು. ಮಕ್ಕಳಿಗೆ ವಿಷಯದಲ್ಲಿ ತಿಳುವಳಿಕೆಯನ್ನು ಮೂಡಿಸಿ ವಿಷಯ ಜ್ಜಾನ ಪರೀಕ್ಷಿಸಿ ಬಹುಮಾನವನ್ನು ನೀಡಿದರು .
ಕಾಯ೯ಕ್ರಮದಲ್ಲಿ ಮಜಿ ಶಾಲೆಗೆ ಕಳೆದ ಐದು ವಷ೯ಗಳಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿಗಳನ್ನು ನೀಡುತ್ತಿರುವ ಮೆಲ್ಕಾರ್ ನ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲಕ ಮಹಮ್ಮದ್ ಶರೀಫ್ ರವರು ದಂಪತಿ ಸಹಿತರಾಗಿ ಆಗಮಿಸಿ ತಮ್ಮ ಮಗಳ ಮೊದಲ ಹುಟ್ಟಿದ ಹಬ್ಬವನ್ನು ಶಾಲಾ ಮಕ್ಕಳೊಂದಿಗೆ ಆಚರಿಸಿದರು. ನೆನಪಿನ ಬಾಬ್ತು ಶಾಲಾ ಕೈತೋಟದಲ್ಲಿ ಒಂದು ಹಣ್ಣಿನ ಗಿಡವನ್ನು ನೆಟ್ಟು ಮಕ್ಕಳಿಗೆ ಸಿಹಿ ಹಂಚಿದರು.
ಕಾರ್ಯಕ್ರಮದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಕುಸುಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಇಂದಿರಾ ನಾಯ್ಕ ,ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ಜ್ಯೋತಿ, ಚಂದ್ರಾವತಿ ,ದೀಪ ,ಸುಶೀಲ, ಕಮಿನಿಟಿ ಆರೋಗ್ಯ ಅಧಿಕಾರಿ ಸಂತೋಷ್, ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.