
ಶಿರಾಡಿಘಾಟ್: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ನಲ್ಲಿನ ರಾಜ್ ಘಾಟ್ ಸಮೀಪದ ಕೆಂಪುಹೊಳೆ ಅರಣ್ಯದಲ್ಲಿ ಅಪರಿಚಿತ ಮಹಿಳೆಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಡಿ.29 ರಂದು ಬೆಳಿಗ್ಗೆ ನಡೆದಿದೆ.

ನಂದೀಶ್ ಎಂಬವರು ಸಕಲೇಶಪುರದಿಂದ ಗುಂಡ್ಯಕ್ಕೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಶಿರಾಡಿಘಾಟ್ ನಲ್ಲಿನ ರಾಜ್ ಘಾಟ್ ಸಮೀಪ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ನಿಲ್ಲಿಸಿ ಪಕ್ಕ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡುಬಂದಿದೆ. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ಮೃತ ಮಹಿಳೆ ಕೆಂಪು ಬಣ್ಣದ ಹೂವು ಇರುವ ಚೂಡಿದಾರ್ ಟಾಪ್ ಹಾಗೂ ಕಡು ನೀಲಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿದ್ದಾರೆ. ಬಲಗೈಮೇಲೆ ‘ಮೂರ್ತಿ’ ಎಂಬ ಹಚ್ಚೆ ಗುರುತು ಇದೆ ಮೃತ ಮಹಿಳೆಯ ಹೋಲಿಕೆಯುಳ್ಳ ಯಾವುದಾದರೂ ಮಹಿಳೆ ಕಾಣೆಯಾದ ಪ್ರಕರಣಗಳಿದ್ದಲ್ಲಿ ಸಕಲೇಶಪುರ ಗ್ರಾಮಾಂತರ ಠಾಣೆ ಫೋನ್ 08173-245183, ಮೊಬೈಲ್ ನಂ. 9480804762ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









