ಬಾಗಲಕೋಟೆ: ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ಮೂವರು ವಾಪಸ್ ಮನೆಗೆ ಬರುವಾಗ ದುರಂತ ಅಂತ್ಯಕಂಡಿದ್ದಾರೆ. ಮೃತರನ್ನು ಗದಗ ಜಿಲ್ಲೆ ಡ.ಸ ಹಡಗಲಿ ಗ್ರಾಮದ ಬಸನಗೌಡ ಪಾಟಿಲ್(60), ಮಂಜುನಾಥ ಮಾರನಬಸರಿ(38) ಮತ್ತು ಸಂಗಮ್ಮ ಪಾಟಿಲ್(55) ಎನ್ನಲಾಗಿದೆ.
ಇವರೆಲ್ಲರೂ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮಕ್ಕೆ ಸೋಮವಾರದಂದು ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಕಾರಿನಲ್ಲಿ ಬಂದಿದ್ದರು. ಅಂತ್ಯಸಂಸ್ಕಾರ ಮುಗಿದ ಬಳಿಕ ಸೋಮವಾರ ರಾತ್ರಿ ವಾಪಸ್ ಕಾರಿನಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಬಳಿ ಟ್ರ್ಯಾಕ್ಟರ್ ರೂಪದಲ್ಲಿ ಬಂದ ಜವರಾಯ ಮೂವರ ಪ್ರಾಣ ಹೊತ್ತೊಯ್ದಿದ್ದಾನೆ.
ಜಾಲಿಹಾಳ ಗ್ರಾಮದ ಬಳಿ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಮಹಿಳೆ ಗದಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.