ತುಮಕೂರು: ಆ ವ್ಯಕ್ತಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ, ಬಳಿಕ ಆತನ ಶವಸಂಸ್ಕಾರ, ತಿಥಿ ಕಾರ್ಯ ಎಲ್ಲವೂ ಮುಗಿದಿತ್ತು. ಆ ಕುಟುಂಬಸ್ಥರು ಬಹುತೇಕ ಅದಾಗಲೆ ನೋವಿನಿಂದ ಹೊರಬಂದಿದ್ದರು. ಅಂದು ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಮೂರು ತಿಂಗಳ ಬಳಿಕ ಇಂದು ದಿಢೀರ್ ಪ್ರತ್ಯಕ್ಷವಾಗುವ ಮೂಲಕ ಕುಟುಂಬಸ್ಥರಿಗೆ ಮತ್ತು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದ್ದಾನೆ. ಬೆಳ್ಳಂಬೆಳಗ್ಗೆ ಆತನ ದರ್ಶನದಿಂದ ಇಡೀ ಗ್ರಾಮವೇ ಶಾಕ್ ಗೆ ಒಳಗಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಈ ಪ್ರಕರಣವಾದ್ರೂ ಏನು? ಹೇಳ್ತೀವಿ ಈ ಸ್ಟೋರಿ ಓದಿ..
ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿರೋ ಪ್ರೇಮಲತಾ ಅವರ ತಂದೆ ನಾಗರಾಜಪ್ಪ ಕಳೆದ 12 ವರ್ಷಗಳ ಹಿಂದೆ ಚಿಕ್ಕಮಾಲೂರನ್ನು ತೊರೆದು ಯಾರಿಗೂ ಹೇಳದೆ ಹೋಗಿದ್ದರು. ಬಳಿಕ 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿರೋ ನಾಗರಾಜಪ್ಪನ ಎರಡನೇ ಮಗಳಾದ ನೇತ್ರಾವತಿಯ ಮನೆಯಲ್ಲಿ ದಿಢೀರ್ ಪ್ರತ್ಯಕ್ಷನಾಗಿದ್ದ.
ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನರ್ಸ್ ಸಹಾಯಕಿಯಾಗಿ ಕೆಲಸ ಮಾಡ್ತಿರೋ ನೇತ್ರಾವತಿ ಅಂದಿನಿಂದಲೂ ತಂದೆ ನಾಗರಾಜಪ್ಪನನ್ನ ನೋಡಿಕೊಳ್ತಿದ್ದರು. ಮಗಳು ಕೆಲಸ ಮಾಡೋ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲೇ ನಾಗರಾಜಪ್ಪ ಸಹ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದನಂತೆ. ಇನ್ನು ಮೂರು ತಿಂಗಳ ಹಿಂದೆ ಇದ್ದಕ್ಕಿದಂತೆ ನಾಗರಾಜಪ್ಪ ಕಾಣೆಯಾಗಿದ್ದಾನೆ. ಎಷ್ಟೇ ಹುಡುಕಿದರು ಯಾರಿಗೂ ಸಿಕ್ಕಿಲ್ಲಾ. ಕಾಣೆಯಾದ 8 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 18 ರಂದು ಸೆಂಟ್ ಜಾನ್ಸ್ ಆಸ್ಪತ್ರೆಯ ಕಾಂಪೌಂಡ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ನೇತ್ರಾವತಿಗೆ ಈ ವಿಷಯ ತಿಳಿಸಿದ್ದು, ನಾಗರಾಜಪ್ಪನೇ ಸಾವನ್ನಪ್ಪಿರ ಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ನಾಗರಾಜಪ್ಪನ ರೀತಿಯಲ್ಲೇ ಹೋಲಿಕೆ ಇದ್ದ ಕಾರಣ ನೇತ್ರಾವತಿ ಸಹ ಶವ ತನ್ನ ತಂದೆಯದ್ದೇ ಎಂದು ಒಪ್ಪಿ, ಕಾನೂನು ರೀತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮರಣ್ಣೋತ್ತರ ಪರೀಕ್ಷೆ ನಡೆಸಿ ಬಳಿಕ ಚಿಕ್ಕಮಾಲೂರಿಗೆ ಶವ ತಂದು ಸ್ಮಶಾನದಲ್ಲಿ ಸಂಸ್ಕಾರ ಮಾಡಿದ್ದಾರೆ.
ಇನ್ನು ಶವಸಂಸ್ಕಾರದ ಬಳಿಕ 11 ದಿನಕ್ಕೆ ನಾಗರಾಜಪ್ಪನ ತಿಥಿ ಸಹ ಮಾಡಲಾಗಿದೆ. ನಾಗರಾಜಪ್ಪನ ಮಗ ಎಲ್ಲಾ ಕಾರ್ಯವೂ ಮುಗಿಸಿ ಮೂರು ತಿಂಗಳಿಗೆ ಕುಟುಂಬಸ್ಥರ ಮನೆಯಲ್ಲಿ ಬಟ್ಟೆ ಸಹ ಹಾಕಿಸಿಕೊಂಡು ಬಂದಿದ್ದಾನೆ. ಮನೆಯಲ್ಲಿ ನಾಗರಾಜಪ್ಪನ ಫೋಟೋಗೆ ಫ್ರೇಂ ಸಹ ಮಾಡಿಸಿ ಗೋಡೆಗೆ ನೇತುಹಾಕಲಾಗಿದೆ.
ನಿನ್ನೆ ಬೆಳಗ್ಗೆ ಇದ್ದಕ್ಕಿದಂತೆ ನಾಗರಾಜಪ್ಪ ಚಿಕ್ಕಮಾಲೂರಿಗೆ ಬಂದು ಎಲ್ಲರನ್ನೂ ಗಾಬರಿಗೊಳಿಸಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ ನಾಗರಾಜಪ್ಪ, ಈ ಹಿಂದಿನಿಂದಲೂ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದ. ಮಗಳ ಮನೆಯಿಂದ ಯಾರಿಗೂ ಹೇಳದೇ ಹೋಗಿ ಸಿಕ್ಕ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮೂರು ತಿಂಗಳು ಬೇರೆ ಬೇರೆ ಊರುಗಳಲ್ಲಿ ತಿರುಗಾಡಿದ್ದಾನೆ. ಬಳಿಕ ಇಂದು ಊರಿಗೆ ಬರಬೇಕೆಂದುಕೊಂಡು ವಾಪಸ್ ಬಂದಿದ್ದಾನೆ. ಬಸ್ ನಿಂದ ಇಳಿದ ಕೂಡಲೇ ಆತನನ್ನ ಆಶ್ಚರ್ಯದಿಂದ ನೋಡಿದ ಗ್ರಾಮಸ್ಥರು ಸತ್ತು ಹೋಗಿದ್ದ ವಿಷಯ ತಿಳಿಸಿದ್ದಾರೆ. ಆತನೇ ಎಲ್ಲರನ್ನೂ ಗುರುತು ಹಿಡಿದು ಮಾತನಾಡಿಸಿದ ಬಳಿಕ ಈತನೇ ಅಸಲಿ ನಾಗರಾಜಪ್ಪ ಎಂದು ತಿಳಿದುಬಂದಿದೆ. ಮೃತಪಟ್ಟ ವ್ಯಕ್ತಿ ಬೇರೆ ಯಾರೋ ಎಂದು ಇದೀಗ ಗೊತ್ತಾಗಿದೆ.
ಒಟ್ಟಾರೆ ಮೃತಪಟ್ಟ ವ್ಯಕ್ತಿಯ ಶವಕ್ಕೂ ನಾಗರಾಜಪ್ಪನಿಗೂ ಸಾಕಷ್ಟು ಹೋಲಿಕೆಗಳು ಇದ್ದು, ಇದೇ ಹೋಲಿಕೆ ಇಷ್ಟೆಲ್ಲಾ ಎಡವಟ್ಟಿಗೆ ಕಾರಣವಾಗಿದೆ. ಯಾರದ್ದೋ ಅನಾಥ ಶವವನ್ನ ತನ್ನ ತಂದೆಯದ್ದೇ ಅಂತಾ ತಿಳಿದ ಕುಟುಂಬಸ್ಥರು ಎಲ್ಲಾ ವಿಧಿವಿಧಾನಗಳನ್ನ ನೆರವೇರಿಸಿ ಅಂತ್ಯಸಂಸ್ಕಾರ ಮಾಡಿದ್ದು, ಒಂದು ಕಡೆಯಾದರೇ. ಸತ್ತರು ಅಂದುಕೊಂಡ ತನ್ನ ತಂದೆಯೇ ಬದುಕಿ ಬಂದಿರೋದು ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದ್ದು ಇನ್ನೊಂದು ಕಡೆಯಾಗಿದೆ. ಈ ಮಧ್ಯೆ ಅಂದು ಸಿಕ್ಕಿದ್ದ ಅನಾಥ ಶವ ಯಾರದ್ದು ಅನ್ನೋ ಪ್ರಶ್ನೆಗೆ ಪೊಲೀಸರು ತಮ್ಮ ತನಿಖೆ ಮೂಲಕ ಉತ್ತರ ಹುಡುಕಿ ಹೊರಟಿದ್ದಾರೆ.