ಸುಳ್ಯ : ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ ಈಗ ಮತ್ತೆ ಎರಡನೇ ಭಾರೀ ಕಂಪಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಇಂದು ಬೆಳಿಗ್ಗೆ 7.45 ರ ಸುಮಾರಿಗೆ ಲಘು ಭೂಕಂಪನಕ್ಕೆ ತುತ್ತಾಗಿದ್ದ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಸಂಜೆ ಮತ್ತೆ ಭೂಮಿ ಅದುರಿದ ಅನುಭವವಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿಕೊಂಡಿದ್ದಾರೆ.
ಚೆಂಬು ಗೂನಡ್ಕ, ತೊಡಿಕಾನ ಭಾಗದ ಶೆಟ್ಯಡ್ಕ, ಕಲ್ಲುಗದ್ದೆ ಮುಂತಾದ ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರ ಪ್ರಕಾರ ಬೆಳಿಗ್ಗಿನಷ್ಟು ತೀವ್ರತೆಯಿಂದ ಕೂಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೇ ಸರಕಾರಿ ಆಡಳಿತ ಸಂಜೆ ಮತ್ತೆ ಭೂ ಕಂಪನಗೊಂಡಿರುವುದನ್ನು ಪುಷ್ಟಿಕರಿಸಬೇಕಿದೆ.
ಭಯಪಡುವ ಅಗತ್ಯವಿಲ್ಲ..! ಸಂಶೋಧಕರು ಏನು ಹೇಳ್ತಾರೆ..?
ಪ್ರಕೃತಿ ವಿಕೋಪದಿಂದ 2018 ರಲ್ಲಿ ಕೊಡಗು ಹಾಗೂ ಸುಳ್ಯದಲ್ಲಿ ಭೀಕರ ದುರಂತವಾಗಿತ್ತು. ಕಂಡು ಕೇಳರಿಯದ ಕುಂಭದ್ರೋಣ ಮಳೆಗೆ ಕರುನಾಡು ತತ್ತರಿಸಿತ್ತು. ಭೂಮಿ ಮೇಲ್ಪದರದಲ್ಲಿ ಉಂಟಾದ ವಿದ್ಯಾಮಾನ ಜನರನ್ನು ಕಂಗೆಡಿಸಿತ್ತು. ಗುಡ್ಡಕುಸಿತ ಜನರ ನೆಮ್ಮದಿಗೆ ಕೊಳ್ಳಿಇಟ್ಟಿತ್ತು. ಈಗ ಇದೇ ರೀತಿಯ ವಿದ್ಯಾಮಾನ ಜನರನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.
ಭೂಗರ್ಭ ಶಾಸ್ತ್ರಜ್ಷರು ಏನು ಹೇಳ್ತಾರೆ..?
ಪ್ರಖ್ಯಾತ ಸಂಶೋಧಕ, ಭೂಗರ್ಭ ಶಾಸ್ತ್ರಜ್ಞ ಹೆಚ್ ಎಸ್ ಎಂ ಪ್ರಕಾಶ್ ಈ ಬಗ್ಗೆ ವಿವರಣೆ ನೀಡಿದ್ದಾರೆ. ಭೂಮಿಯ 10 -20 ಕಿಲೋ ಮೀಟರ್ ಆಳದಲ್ಲಿ ನಡೆಯುವ ಚಲನ ವಲನ, ವ್ಯತ್ಯಾಸ ಭೂಮಿ ಕಂಪಿಸುವುದಕ್ಕೆ ಕಾರಣವಾಗುತ್ತದೆ. ಭೂಮಿಯ ಮೇಲ್ಮೈನಲ್ಲಿ ಆಗುವ ಬದಲಾವಣೆ ಅಂದರೆ ವಿಪರೀತ ಮಳೆ, ಗುಡ್ಡಕುಸಿತ, ಪ್ರವಾಹ ಇದೆಲ್ಲಾ ಭೂಮೇಲಿನ ವಿದ್ಯಾಮಾನವಾಗಿದೆ. ಭೂಕಂಪ ಹಾಗೂ ಭೂ ಮೇಲಿನ ವಿದ್ಯಾಮಾನಕ್ಕೆ ಸಾಕಷ್ಟು ವ್ಯತ್ಯಾಸ ಇದೆ ಎಂದಿದ್ದಾರೆ.
ಅಂತೆಯೇ ಭೂಗರ್ಭ ಶಾಸ್ತ್ರಜ್ಞ ಹೆಚ್ ಎಸ್ ಎಂ ಪ್ರಕಾಶ್ ರವರ ಅಧ್ಯಯನದ ಪ್ರಕಾರ ಕಳೆದ 2 ವರ್ಷ ಯಾವುದೇ ಭೀಕರ ಅವಘಡ ಸಂಭವಿಸಲ್ಲ ಎಂದಿದ್ದರು. ಈ ಭಾರಿಯೂ ಭೂಮಿಯ ಮೇಲ್ಮೈನಲ್ಲಿ ದುರಂತ ನಡೆಯಲ್ಲ. ವಿಶ್ವದಲ್ಲೇ ಈ ವರ್ಷ ಆವಿಯ ಮೂಲ ನಿಷ್ಕ್ರಿಯಗೊಂಡಿದೆ. ಇದರಿಂದ ಭಾರತದ ಸುತ್ತಮುತ್ತ ಮೋಡ ಹೆಚ್ಚಾಗಿಲ್ಲ. ಹೀಗಾಗಿ ಮಳೆ ಕೊರತೆ ಉಂಟಾಗಿದೆ. ಜನರು ಪ್ರವಾಹದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಕೊಡಗು ಸುಳ್ಯದಲ್ಲಿ ಆಗುವ ವಿದ್ಯಾಮಾನಗಳ ಬಗ್ಗೆ ಭೂವಿಜ್ಞಾನಿಗಳ ತಂಡ ಇದರ ಕೇಂದ್ರ ಬಿಂದು ಎಲ್ಲಿ ಎಂಬುವುದನ್ನು ಕಂಡುಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಆಗುವ ಭೂ ಒಳಗಿನ ಚಟುವಟಿಕೆಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸುವ ಅಗತ್ಯ ಬಹಳಷ್ಟಿದೆ.