

ಹೋಳಿ ಹಬ್ಬದಲ್ಲಿ ಹುಡುಗಿಯ ಮೇಲೆ ಬಣ್ಣವನ್ನು ಹಾಕಿದ್ದಾನೆ ಎಂಬ ಕಾರಣಕ್ಕೆ ಯುವಕನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಬೆಳಮಾರನಹಳ್ಳಿ ಗ್ರಾಮದಲ್ಲಿ ಕಾಲೇಜು ಓದುತ್ತಿದ್ದ ಬಿ.ಸಿ. ಮಧು ಹಲ್ಲೆಗೆ ಒಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಿ.ಸಿ.ಮಧು ಕಾಲೇಜು ಮುಗಿಸಿ ಬರುವಾಗ ಗ್ರಾಮದ ಯುವತಿಯ ಮೇಲೆ ಬಣ್ಣವನ್ನು ಹಾಕಿದ್ದಾನೆ. ಇದರಿಂದ ತೀವ್ರ ಕೋಪಗೊಂಡ ಹುಡುಗಿಯ ಸಂಬಂಧಿಕರು ಬಣ್ಣ ಹಾಕಿದ ಯುವಕನ್ನು ಕರೆಸಿ ಗ್ರಾಮದ ಹೊರಗಿರುವ ಶೆಡ್ನಲ್ಲಿ 2 ದಿನಗಳ ಕಾಲ ಕೂಡಿಹಾಕಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ ಬಟ್ಟೆಯನ್ನು ಬಿಚ್ಚಿ ಬೆತ್ತಲೆಗೊಳಿಸಿ ಕಟ್ಟಿಗೆ ಮತ್ತು ಹಗ್ಗದಿಂದ ಹಲ್ಲೆ ಮಾಡಿದ ಕಾರಣ, ದೇಹದ ಬಹುತೇಕ ಭಾಗಗಳಲ್ಲಿ ತೀವ್ರ ಪ್ರಮಾಣದ ಗಾಯಗಳಾಗಿವೆ. ಇನ್ನು ಬಣ್ಣ ಹಾಕಿದ್ದಕ್ಕೆ ಕ್ಷಮೆ ಕೇಳಿದರೂ ಬಿಡದೇ ಥಳಿಸಿದ್ದು, ಗಾಯಾಳು ಮಧುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಳಮಾರನಹಳ್ಳಿ ಗ್ರಾಮದ ಡಿ.ಎನ್. ಮಧು ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿದ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.








