

ಮಂಗಳೂರು: 2014ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. 2014ರ ಫೆಬ್ರವರಿ 8ರಂದು ಸಂಜೆ ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಸಮೀಪ ನಿವಾಸಿಯಾಗಿದ್ದ ಸುಮತಿ ಪ್ರಭು ಅವರನ್ನು ಕುತ್ತಿಗೆಗೆ ಚೂರಿಯಿಂದ ಕೊಲೆಗೈದು, ಅವರ ಮೈಮೇಲಿದ್ದ ಸುಮಾರು ₹3.80 ಲಕ್ಷ ಮೌಲ್ಯದ 192 ಗ್ರಾಂ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಶಿವರಾಮ್, ಬಹದ್ದೂರ್ ಸಿಂಗ್ @ ಬಹದ್ದೂರ್ @ ಬುಯ್ಯ ಹಾಗೂ ಶಹನ್ವಾಜ್ @ ಶಾನು ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.ಆದರೆ, ಎರಡನೇ ಆರೋಪಿ ಬಹದ್ದೂರ್ ಸಿಂಗ್ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆ ನ್ಯಾಯಾಲಯವು ಅವನ ವಿರುದ್ಧ ದಸ್ತಗಿರಿ ವಾರಂಟ್ ಹಾಗೂ ಉದ್ಘೋಷಣೆ ಹೊರಡಿಸಿತ್ತು.



ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗೆ ಮುಂದಾಗಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿ ಗ್ರಾಮದಲ್ಲಿ ಅಡಗಿದ್ದ ಆರೋಪಿ ಬಹದ್ದೂರ್ ಸಿಂಗ್ ಅವರನ್ನು ಮೇ 3, 2026ರಂದು ಮಧ್ಯಾಹ್ನ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 655ನೇ ಅಜಿತ್ ಮ್ಯಾಥ್ಯು, ಸಿಪಿಸಿ 2475ನೇ ಸುನೀಲ್ ಕುಸನಾಳ, ಸಿಪಿಸಿ 2354ನೇ ಮೋಹನ್ ರವರು ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ ಎಂಬಾತನ್ನು ದಸ್ತಗಿರಿ ಮಾಡಿರುತ್ತಾರೆ ಠಾಣಾ ಹೆಚ್.ಸಿ 611ನೇ ರಾಜೇಂದ್ರ ಪ್ರಸಾದ್, ಪಿಸಿ 3202ನೇ ಸತೀಶ್ ರವರು ಸಹಕರಿಸಿರುತ್ತಾರೆ.








