ಕಾಸರಗೋಡು: ಕೇರಳದಲ್ಲಿ ಕಳೆದ ಒಂದು 3-4 ದಿನಗಳಲ್ಲಿ ಮತದಾನ ನಡೆದಿದ್ದು, ಈಗ ಫಲಿತಾಂಶವು ಹೊರಬಂದಿದೆ.ಇದರ ನಡುವೆ ಮತ ಎಣಿಕೆಯ ವಿಜಯೋತ್ಸವದ ನೆಪದಲ್ಲಿ ಮಂಗಲ್ಪಾಡಿಯಲ್ಲಿನ ಮನೆಯೊಂದಕ್ಕೆ ಕಲ್ಲು ತೂರಾಟ ನಡೆಸಿದ್ದು, ಎಲ್ಡಿಎಫ್ ಸ್ವತಂತ್ರ ಸದಸ್ಯ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ಇಲ್ಲಿನ ಎರಡನೇ ವಾರ್ಡ್ ಉಪ್ಪಳ ಗೇಟ್ ಸ್ವತಂತ್ರ ನಿವಾಸಿ ಮತ್ತು ಎನ್ಸಿಪಿ-ಎಸ್ ಮಂಜೇಶ್ವರಂ ಬ್ಲಾಕ್ ಉಪಾಧ್ಯಕ್ಷ ಅಶ್ರಫ್ ಪಟ್ಲಂಪಾರೆ ಮತ್ತು ಅವರ ಪತ್ನಿ ಅವ್ವಾಬಿ ಎಂಬವರೇ ಗಾಯಗೊಂಡವರು.

ಇಬ್ಬರನ್ನೂ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯೋತ್ಸವ ನಡೆಸಿದ ಮುಸ್ಲಿಂ ಲೀಗ್ ಕಾರ್ಯಕರ್ತರು ಅವರ ವಿರುದ್ಧ ಸ್ಪರ್ಧಿಸಿದ ಇವರ ಮನೆ ಮೇಲೆ ಕಲ್ಲು ತೂರಾಟ, ಪಟಾಕಿ ಸಿಡಿಸಿದ್ದರು ಎಂಬುದಾಗಿ ದೂರಲಾಗಿದೆ. ಮನೆಯ ಮುಂಭಾಗದ ಕಿಟಿಕಿಯ ಗಾಜು ಒಡೆದು ಹೋಗಿದ್ದು, ಅವ್ವಾಬಿ ಅವರ ಎರಡೂ ಕಾಲುಗಳಿಗೆ ಗಾಯವಾಗಿದೆ. ಅವರ ಮಕ್ಕಳಾದ ಅಮೀರಾ ಮತ್ತು ಶೈಲಾ ಇವರು ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಬಿ. ವಿಜಯ್ ಭರತ್ ರೆಡ್ಡಿ ಸೂಚನೆ ಮೇರೆಗೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ತೀವ್ರ ಪೈಪೋಟಿ ನಡೆದ ಈ ವಾರ್ಡ್ ನಲ್ಲಿ ಲೀಗ್ ನ ಗೋಲ್ಡನ್ ಅಬ್ದುಲ್ ರೆಹಮಾನ್ 94 ಮತಗಳಿಂದ ಗೆಲುವು ಸಾಧಿಸಿದ್ದರು.








