
ಮುಂಬೈ: ಮಹಾರಾಷ್ಟ್ರದ ಚೆಂಬೂರಿನ ಪಂಜ್ರಾಪೋಲ್ ಪ್ರದೇಶದಲ್ಲಿ ಹಲವಾರು ಬೆಕ್ಕುಗಳನ್ನು ನಿಗೂಢವಾಗಿ ಸರಣಿ ಹತ್ಯೆಗೈದಿದ್ದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯ ಮೊದಲ ಹೆಸರು ಶಿವ ಎಂದಾಗಿದೆ. ಆತ ಚೆಂಬೂರ್ ನ ಪಂಜ್ರಾಪೋಲ್ ಪ್ರದೇಶದಲ್ಲಿ ನಿರ್ವಸತಿಗನಾಗಿ ಅಲೆಯುತ್ತಿದ್ದ ಎಂದು ಹೇಳಲಾಗಿದೆ.ಕಾಮವಾಡಿ, ಪಂಜ್ರಾಪೋಲ್ ಮತ್ತು ಶಾನಿ ಮಂದಿರ್ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ, ಶಿವ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ನಾನು ಆರಕ್ಕಿಂತ ಹೆಚ್ಚು ಬೆಕ್ಕುಗಳನ್ನು ಹತ್ಯೆಗೈದಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.ಆಗಸ್ಟ್ ಮಧ್ಯಭಾಗದಿಂದ ಬೆಕ್ಕಿನ ಮರಿಗಳು ಸೇರಿ ಕನಿಷ್ಠ 20 ಬೆಕ್ಕುಗಳು ಹತ್ಯೆಗೀಡಾಗಿವೆ ಎಂದು ವರದಿಯಾಗಿತ್ತು. ಬೆಕ್ಕುಗಳ ಸರಣಿ ಹಂತಕ ಅಥವಾ ಹಂತಕರ ಕುರಿತು ಮಾಹಿತಿ ನೀಡಿದವರಿಗೆ 50,000 ರೂ. ನಗದು ಬಹುಮಾನ ನೀಡುವುದಾಗಿ ಇದಕ್ಕೂ ಮುನ್ನ ಪೇಟಾ ಇಂಡಿಯಾ ಪ್ರಕಟಿಸಿತ್ತು.
ಇತ್ತೀಚೆಗೆ ಒಂದೇ ರಾತ್ರಿ ಆರು ಬೆಕ್ಕುಗಳನ್ನು ಹರಿತವಾದ ಆಯುಧದಿಂದ ಭೀಕರವಾಗಿ ಹತ್ಯೆಗೈದಿರುವುದನ್ನು ಬೆಕ್ಕುಗಳಿಗೆ ಆಹಾರ ಉಣಿಸುವ ರುಬಿನಾ ಪಠಾಣ್ ಎಂಬುವವರು ಪತ್ತೆ ಹಚ್ಚಿದ್ದರು. ಇದಾದ ಬಳಿಕ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿ ಆರ್ಸಿಎಫ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಆರೋಪಿ ಶಿವ ಯಾಕೆ ಬೆಕ್ಕುಗಳನ್ನು ಹತ್ಯೆಗೈದಿದ್ದಾನೆ ಹಾಗೂ ಆತನೇನಾದರೂ ಮಾನಸಿಕ ಅಸ್ವಸ್ಥನೇ ಎಂಬುದರ ಕುರಿತು ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ.








