ಕೊಪ್ಪಳ(ನ.11): ಚಿರತೆ ಕರಡಿ ಕಾಟ ಹಿನ್ನೆಲೆಯಲ್ಲಿ ನ.12 ರಿಂದ 15 ದಿನಗಳ ಕಾಲ ಆನೆಗೊಂದಿ ಅಂಜನಾದ್ರಿ ಬೆಟ್ಟಕ್ಕೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅಂಜನಾದ್ರಿ ಬೆಟ್ಟದ ಶ್ರೀಆಂಜನೇಯಸ್ವಾಮಿ ದೇಗುಲ, ಪಂಪಾಸರೋವರ, ಆದಿಶಕ್ತಿ ದೇಗುಲ ಮತ್ತು ಋಷಿಮುಖ ಪರ್ವತ ಸುಗ್ರೀವಾಂಜನೇಯ ದೇಗುಲಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಆನೆಗೊಂದಿ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಚಿರತೆ, ಕರಡಿಗಳ ಹಾವಳಿ ಹೆಚ್ಚಾಗಿದ್ದು ಆದಿಶಕ್ತಿ ದೇಗುಲದ ಕೆಲಸಗಾರರನ್ನು ಚಿರತೆ ಕೊಂದುಹಾಕಿತ್ತು. ಜಂಗ್ಲಿ ರಂಗಾಪೂರದ ಮಹಿಳೆ ಹಾಗೂ ಪ್ರವಾಸಕ್ಕೆ ಆಗಮಿಸಿದ್ದ ಹೈದ್ರಾಬಾದ್ ಬಾಲಕನೋರ್ವನನ್ನು ಚಿರತೆ ಗಾಯಗೊಳಿಸಿತ್ತು.
ಸುತ್ತಲಿನ ಗ್ರಾಮಗಳಲ್ಲಿ ಚಿರತೆ, ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು ಜನರು ಭಯಭೀತರಾಗಿದ್ದಾರೆ. ಚಿರತೆ ಕರಡಿಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು ಡ್ರೋಣ್ ಮತ್ತು ಸಿಸಿ ಕ್ಯಾಮರಾಗಳ ಮೂಲಕ ಚಿರತೆ ಕರಡಿಗಳ ಜಾಗ ಪತ್ತೆ ಮಾಡಲಾಗುತ್ತಿದೆ. ಚಿರತೆ, ಕರಡಿಗಳ ಸೆರೆ ಬಳಿಕ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಡಳಿತ ಆದೇಶದಲ್ಲಿ ತಿಳಿಸಿದೆ.