



ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮಡಿಲಿನಲ್ಲಿ ನಡೆಯುವ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳವು ಮಾ.1 ಮತ್ತು 2ರಂದು ನಡೆಯಲಿದೆ.
ಈ ಕಂಬಳವು ಧಾರ್ಮಿಕವಾಗಿಯೂ ಮಹತ್ವ ಪಡೆದಿದೆ. ಕಂಬಳಕ್ಕೂ ಶ್ರೀ ದೇವರಿಗೂ ಅವಿನಾಭಾವ ನಂಟಿದೆ ಎಂಬುದು ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲೂ ಕಂಡು ಬಂದಿದೆ.ಅನಾದಿ ಕಾಲದಲ್ಲಿ ಅರಸು ವಂಶಸ್ಥರಿಂದ ನಡೆದುಕೊಂಡು ಬರುತ್ತಿದ್ದ ಪುತ್ತೂರು ಕಂಬಳ ಕಾಲ ಸ್ಥಿತ್ಯಂತರಗಳ ಅನಿವಾರ್ಯತೆಗೆ ಸಿಲುಕಿ ಇತಿಹಾಸದ ಪುಟ ಸೇರಿತು. 1993ರಲ್ಲಿ ಮತ್ತೆ ಪ್ರಾರಂಭಗೊಂಡ ಕಂಬಳಕ್ಕೆ ಈ ಬಾರಿ 32ನೇ ವರ್ಷದ ಸಂಭ್ರಮ. ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯ ಕರೆಯಲ್ಲಿ ಹೊನಲು ಬೆಳಕಿನ ಕಂಬಳ ಕೂಟ ನಡೆಯಲಿದೆ.
1993ರಲ್ಲಿ ದಿ| ಜಯಂತ ರೈ ಕಜೆಮಾರು ಮುಂದಾಳತ್ವದಲ್ಲಿ ಕಂಬಳ ಮರು ಆರಂಭಗೊಂಡಿತ್ತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದ್ಯಮಿ ದಿ| ಮುತ್ತಪ್ಪ ರೈ ಅವರು ಕಂಬಳದ ಉನ್ನತಿಗೆ ಕೊಡುಗೆ ನೀಡಿದರು. ಆ ಕೂಟದಲ್ಲಿ 100 ಕ್ಕೂ ಹೆಚ್ಚು ಜತೆಕೋಣಗಳು ಭಾಗವಹಿಸಿದ್ದವು. ಕಳೆದ ವರ್ಷ 180ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದವು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಎಪ್ರಿಲ್ನಲ್ಲಿ ನಡೆಯುವ ಬ್ರಹ್ಮರಥೋತ್ಸವದ ಬಳಿಕ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮ ಇದಾಗಿದೆ.








