ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡ ಕೆರೆಯ ಬಳಿಯೇ ಅನ್ನದಾನ


ಪುತ್ತೂರು: ಕಾರಣಿಕ ಪ್ರಸಿದ್ದ ಪುತ್ತೂರು ಶ್ರೀಮಹಾಲೀಂಗೇಶ್ವರ ದೇವಸ್ಥಾನದ ಜಾತ್ರಾರಂಭಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ನೇತ್ರತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜಾತ್ರೋತ್ಸವದ ಸಂದರ್ಭ ಭಕ್ತಾದಿಗಳಿಗೆ ಅನ್ನಪ್ರಸಾದ ನೀಡಲು ದೇವಸ್ಥಾನದ ಹಿಂಬದಿಯಲ್ಲಿರುವ ಕೆರೆಯ ಪಕ್ಕದಲ್ಲಿರುವ ವಿಶಾಲ ಖಾಲಿ ಜಾಗದಲ್ಲಿ ತಾತ್ಕಲಿಕ ಅನ್ನಛತ್ರ ನಿರ್ಮಿಸಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದ್ದು. ಇದಕ್ಕೆ ಚಪ್ಪರ ಮುಹೂರ್ತ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ,ನಿತ್ಯ ಬಲಿ ನಡೆದ ಬಳಿಕ ಮಾ. 24 ರಂದು ಬೆಳಿಗ್ಗೆ ನಡೆಯಿತು.
ಕೆರೆಯ ಪಕ್ಕದಲ್ಲಿ ದೇಗುಲದ ಹೆಸರಿನಲ್ಲಿದ್ದ ಜಮೀನಿನಲ್ಲಿ ಹಲವು ದಶಕಗಳಿಂದ ಮನೆ ಕಟ್ಟಿಕೊಂಡಿದವರನ್ನು ತೆರವುಗೊಳಿಸುವ ಕಾರ್ಯ ಎರಡು ತಿಂಗಳ ಹಿಂದೆ ನಡೆದಿತ್ತು. ಇದಾದ ಬಳಿಕ ನಡೆಯುತ್ತಿರುವ ಮೊದಲು ಜಾತ್ರೆಗೆ ಅಲ್ಲಿ ಅನ್ನಛತ್ರ ನಿರ್ಮಿಸುವ ಮಹತ್ವದ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಲಿ ತೆಗೆದುಕೊಂಡಿದೆ. ಕೆರೆಯಲ್ಲಿ ನೀರು ಉಕ್ಕಿ ಬಂದು ಅಲ್ಲಿ ಬಿದ್ದಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡ ಐತಿಹ್ಯವಿರುವ ದೇವರ ಕೆರೆಯ ಪಕ್ಕದಲ್ಲೇ ಶ್ರೀಮಹಾದೇವನ ಜಾತ್ರೋತ್ಸವದ ಅನ್ನದಾನ ನಡೆಯಲಿರುವುದುಈ ಬಾರಿಯ ಜಾತ್ರೋತ್ಸವದ ವಿಶೇಷವಾಗಿರಲಿದೆ.
ಕೆರೆಯ ಎಡಭಾಗದಲ್ಲಿ ಹಾಗೂ ದೇವರ ಕೆರೆಯಲ್ಲಿರುವ ಕಟ್ಟೆಗೆ ಸಮಾನಂತರವಾಗಿರುವ ಸ್ಥಳದಲ್ಲಿ ದೇವಳದ ಪ್ರಧಾನ ಅರ್ಚಕ ವೇ. ಮೂ. ವಸಂತ ಕದಿಲಾಯರವರು ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ,ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೇಡಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ ಅವರು ಚಪ್ಪರ ಮುಹೂರ್ತ ನೆರವೇರಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಸದಸ್ಯೆ ವೀಣಾ ಬಿ.ಕೆ., ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಉದ್ಯಮಿಗಳಾದ ಕರುಣಾಕರ ರೈ ದೇರ್ಲ, ನುಳಿಯಾಲು ರವೀಂದ್ರ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.