





ವಿಟ್ಲ: ಕರಾವಳಿ ನಡೆಯುವಂತಹ ಕೋಮು ಗಲಭೆಯ ಬಗ್ಗೆ ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಸ್ಮಾ ಹಸೈನಾರ್ ವಿಟ್ಲ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಮನೆ ನಿರ್ಮಾಣ, ಮಕ್ಕಳನ್ನು ಶಾಲೆಗೆ ಕಳುಹಿಸಲು ಅಗತ್ಯ ನೆರವು ಸೇರಿ ಜಾತಿ ಧರ್ಮವನ್ನು ನೋಡದೆ ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಿದ್ದೇವೆ. ಸರ್ಕಾರ ಅಹಿತಕರ ಘಟನೆಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಕೆಲಸ ಕಾರ್ಯಗಳಿಂದ ಹಿಂದೆ ಸರಿದು ತಟಸ್ಥರಾಗಲಿದ್ದೇವೆ ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಸ್ಮಾ ಹಸೈನಾರ್ ಹೇಳಿದರು.
ಕೊಳ್ನಾಡಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇವೆ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಮನಸ್ಸಿಗೆ ಬೇಸರವುಂಟು ಮಾಡಿದೆ. ರಸ್ತೆಯಲ್ಲಿ ನಡೆದಾಡಲು ಸಾಮಾನ್ಯ ಜನರು ಭಯಭೀತರಾಗುತ್ತಿದ್ದಾರೆ. ಕೃತ್ಯ ನಡೆಸುವ ಭಯೋತ್ಪಾದಕರನ್ನು, ಕುಮ್ಮಕ್ಕು ನೀಡುವ ಸಂಘಟನೆಯ ವ್ಯಕ್ತಿಗಳನ್ನು, ಬಾಡಿಗೆ ಭಾಷಣ ಕಾರರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ವಂಸಕ ಕೃತ್ಯಗಳನ್ನು ತಡೆಯುವಲ್ಲಿ ವಿಫಲರಾದ ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಹರಿಪ್ರಸಾದ್, ಮಂಜುನಾಥ ಭಂಡಾರಿ ಅವರಿಗೆ ಅಥವಾ ಮಾಜಿ ಸಚಿವ ರಮಾನಾಥ ರೈ ಅವರನ್ನು ಎಂ.ಎಲ್.ಸಿ. ಮಾಡಿಯಾದರೂ ಉಸ್ತುವಾರಿ ಸಚಿವರನ್ನಾಗಿಸಬೇಕಾಗಿದೆ ಎಂದು ಆಗ್ರಹಿಸಿದರು.