ಚೆನ್ನೈ: ಬುರೆವಿ ಚಂಡಮಾರುತ ಪರಿಣಾಮ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಮಿಳುನಾಡಿನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಕುದ್ದಲೂರು ಜಿಲ್ಲೆಯಲ್ಲಿ ಸುಮಾರು 300 ಗ್ರಾಮಗಳು ಜಲಾವೃತವಾಗಿದ್ದು, ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಚಂಡಮಾರುತದಿಂದ ಸಾವನ್ನಪ್ಪಿದ ಗೋವುಗಳಿಗೆ 30 ಸಾವಿರ ರೂ., ಕರುವಿಗೆ 16 ಸಾವಿರ ರೂ. ಹಾಗೂ ಮೇಕೆಗೆ 3 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಬುರೆವಿ ಚಂಡಮಾರುತ ಕಡಿಮೆ ಒತ್ತಡಕ್ಕೆ ದುರ್ಬಲಗೊಂಡಿದ್ದು, ಗಲ್ಫ್ ಆಫ್ ಮನ್ನಾರ್ ಪ್ರದೇಶದಲ್ಲಿ ಸ್ಥಿರವಾಗಿ ಉಳಿದಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ತಮಿಳುನಾಡು ದಕ್ಷಿಣ ಹಾಗೂ ಕರಾವಳಿ ಪ್ರದೇಶ, ಪಾಂಡಿಚೇರಿಯಲ್ಲಿ ಭಾರೀ ಮಳೆ ಮುಂದುವರಿಯುವ ಎಚ್ಚರಿಕೆ ನೀಡಿದೆ. ಕಡಲೂರು ಜಿಲ್ಲೆಯಲ್ಲಿ ಸರ್ಕಾರ ಸುಮಾರು 60 ಸಾವಿರ ಮಂದಿಯನ್ನ ಹಾಗೂ ರಾಮನಾಥಪುರಂ ಜಿಲ್ಲೆಯಿಂದ 5 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಿದೆ.