ಮಾನವೀಯತೆ ಮೆರೆದ ಗ್ರಾಪಂ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ



ಪುತ್ತೂರಿನ ಕೆದಂಬಾಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿಯವರು ಮಾನವೀಯ ಕಾರ್ಯದ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಿಂಗಳಾಡಿ ದರ್ಬೆ ಅಂಗನವಾಡಿ ಸಮೀಪ ರಸ್ತೆ ಬದಿಯಲ್ಲಿ ಸತ್ತು ಬಿದ್ದಿದ್ದ ಬೀದಿ ನಾಯಿಯನ್ನು ಕಂಡ ಅವರು, ಯಾರಿಗೂ ಮಾಹಿತಿ ನೀಡದೇ ಸ್ವತಃ ಮನೆಗೆ ತೆರಳಿ ಹಾರೆ-ಪಿಕ್ಕಾಸು ತಂದು ಗುಂಡಿ ತೆಗೆದು ನಾಯಿಯ ಶವಕ್ಕೆ ಮಣ್ಣಿಟ್ಟಿದ್ದಾರೆ.ಈ ಘಟನೆ ಕಂಡ ಗ್ರಾಮಸ್ಥರು ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ.
ಪ್ರವೀಣ್ ಶೆಟ್ಟಿಯವರು ಗ್ರಾಮ ಪಂಚಾಯತ್ ಸದಸ್ಯರಾಗಿ ಸುಮಾರು 10 ವರ್ಷ ಸೇವೆ ಸಲ್ಲಿಸಿದ್ದು, ಅದರಲ್ಲಿ 5 ವರ್ಷ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ಪಂಚಾಯತ್ಗೆ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ, ಸುಮಾರು ₹75 ಲಕ್ಷ ಅನುದಾನ ಹಾಗೂ ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ.ಸಾಮಾಜಿಕ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುವ ಅವರು ತುರ್ತು ಸಂದರ್ಭಗಳಲ್ಲಿ ರಕ್ತದಾನ, ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಂತಹ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
“ಪ್ರತಿಯೊಂದಕ್ಕೂ ಪಂಚಾಯತ್ ಅಥವಾ ಇತರರನ್ನು ನಿರೀಕ್ಷಿಸುವ ಬದಲು ನಾವೇ ಇಂತಹ ಕೆಲಸ ಮಾಡಿದರೆ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯ,” ಎಂದು ಪ್ರವೀಣ್ ಶೆಟ್ಟಿಯವರು ತಿಳಿಸಿದ್ದಾರೆ.
ಅವರು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಎಲಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.








