


ಬೆಂಗಳೂರು: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಕಾರಣ , ಆಕೆಯ ಅಗಲಿಕೆ ತಾಳಲಾರದೆ ಪ್ರಿಯಕರ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಒರಿಸ್ಸಾ ಮೂಲದ ಮಂಜುಳಾ ಮತ್ತು ದೀಪಾಂಕ್ ಆತ್ಮಹತ್ಯೆ ಮಾಡಿಕೊಂಡ ಜೋಡಿ.
ದೀಪಾಂಕ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸಹ ಮಂಜುಳಾನನ್ನು ಮದುವೆಯಾಗಿದ್ದು, ಕಳೆದ 15 ದಿನಗಳ ಹಿಂದೆ ಒರಿಸ್ಸಾದಿಂದ ಬಂದು ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದ ಲವಕುಶ ಲೇಔಟ್ನಲ್ಲಿ ವಾಸವಾಗಿದ್ದರು. ಹೊಟ್ಟೆಪಾಡಿಗಾಗಿ ಗಂಡ ಬೊಮ್ಮಸಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಹೆಂಡತಿ ಮಂಜುಳ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.
ಮಂಗಳವಾರ(ಫೆ.24) ರಾತ್ರಿ ಇಬ್ಬರ ಮಧ್ಯೆ ನಡುವೆ ಜಗಳ ಶುರುವಾಗಿದ್ದು, ಇದರಿಂದ ಮನನೊಂದಿದ ಮಂಜುಳ, ದೀಪಾಂಕ್ ಹೊರಗಡೆ ಹೋದ ವೇಳೆ ಮಧ್ಯರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸದಿಂದ ಬಂದಾಗ ಪತ್ನಿಯ ಶವ ಕಂಡು ಗಾಬರಿಗೊಂಡ ದೀಪಾಂಕ್ ಶವದ ಮುಂದೆ ಅಳುತ್ತಾ ವೀಡಿಯೋ ಮಾಡಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಸೂರ್ಯನಗರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅತ್ತಿಬೆಲೆ ಆಕ್ಸರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಮಲ್ಲೇಶ್ಗೌಡ ಸೂರ್ಯನಗರ ಇನ್ಸೆಕ್ಟರ್ ಸಂಜೀವ್ ಮಹಾಜನ್ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








