
ಸುಳ್ಯ: ಸುಳ್ಯ ತಾಲೂಕಿನ ಐವರ್ನಾಡು ಗ್ರಾಪಂ ವ್ಯಾಪ್ತಿಯ ಬೆಳ್ಳಾರೆ-ಸುಳ್ಯ ರಸ್ತೆಯ ಬೆಂಗಮಲೆ ಎಂಬಲ್ಲಿ ರಸ್ತೆಯ ಬದಿ ತ್ಯಾಜ್ಯ ಎಸೆದಿರುವ ಅಂಗಡಿ ಮಾಲಕರ ಮೇಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.





ಬೇಂಗಮಲೆಯ 3 ಕಡೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಕಂಡು ಬಂದಿದೆ. ತೆರೆದು ಪರಿಶೀಲಿಸಿದಾಗ ಎಲ್ಲಾ ಮೂರೂ ತ್ಯಾಜ್ಯದ ಚೀಲಗಳಲ್ಲಿ ಸುಳ್ಯ ಗಾಂಧಿನಗರದ ಅಯೋಧ್ಯಾ ಮೆನ್ಸ್ಡ್ರೆಸ್ ಸ್ಪೋಟ್ರ್ಸ್ ಜೆರ್ಸಿ ಶಾಪ್ ಎಂಬ ವಸ್ತ್ರ ಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡುಬಂದಿದೆ. ಚೀಲಗಳಲ್ಲಿ ವಸ್ತ್ರ ಮಳಿಗೆಗೆ ಸಂಬಂಧಿಸಿದ ಹಲವು ಬಿಲ್ಲುಗಳು, ಮಳಿಗೆಯ ಹೆಸರಿಗೆ ನೀಡಲಾದ ಜಾತ್ರೆಯ ಆಮಂತ್ರಣ ಹಾಗೂ ಮಳಿಗೆಯ ವಿದ್ಯುತ್ ಸಂಪರ್ಕದ ಮೆಸ್ಕಾಂ ಬಿಲ್ಲು ಲಭಿಸಿದೆ. ತ್ಯಾಜ್ಯಗಳು ಕೂಡ ವಸ್ತ್ರ ಮಳಿಗೆಯದ್ದಾಗಿದೆ. ಹಾಗಾಗಿ ಅಂಗಡಿ ಮಾಲಕರಿಗೆ ದೂರವಾಣಿ ಕರೆ ಮಾಡಿ ತ್ಯಾಜ್ಯದ ಚೀಲಗಳು ಸಿಕ್ಕಿರುವ ಬಗ್ಗೆ ತಿಳಿಸಿ ಗ್ರಾಪಂ ಕಚೇರಿಗೆ ಬಂದು ನಿಗದಿತ ದಂಡವನ್ನು ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ ಅಂಗಡಿ ಮಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ತಾನು ತ್ಯಾಜ್ಯಎಸೆದಿಲ್ಲ ಎಂದು ವಾದಿಸಿ, ದಂಡದ ಮೊತ್ತವನ್ನು ಕಡಿಮೆ ಮಾಡುವಂತೆ ಹೇಳಿ ದಂಡ ಪಾವತಿಸಲು ನಿರಾಕರಿಸಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುವುದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಆಗಿರುವುದರಿಂದ ತ್ಯಾಜ್ಯಎಸೆದ ವ್ಯಕ್ತಿಗಳಿಗೆ ಸೂಕ್ತ ದಂಡ ಅಥವಾ ಶಿಕ್ಷೆಯನ್ನು ವಿಧಿಸದಿದ್ದಲ್ಲಿ ಸಾರ್ವಜನಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ದುಸ್ತರವಾಗಲಿದೆ. ಈ ವಿಚಾರವನ್ನು ಐವರ್ನಾಡು ಗ್ರಾಪಂ ಆಡಳಿತ ಮಂಡಳಿಯು ಜಿಪಂ ಸಿಇಒ ಅವರ ಗಮನಕ್ಕೆ ತಂದಿದ್ದರು. ಸಿಇಒ ಅವರ ಸಲಹೆಯ ಮೇರೆಗೆ ಐವರ್ನಾಡು ಪಿಡಿಒ ಶ್ಯಾಮ ಪ್ರಸಾದ್ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದರಂತೆ ಪ್ರಕರಣ ದಾಖಲಾಗಿದೆ







