- Advertisement -
- Advertisement -





ಕಾರ್ಕಳ: ಬಾವಿಯ ಮಣ್ಣು ತೆಗೆಯಲು ಹೋಗಿ ಬಾವಿಗೆ ಬಿದ್ದ ಮೂವರನ್ನು ಕಾರ್ಕಳ ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ರವಿವಾರ(ಮೇ 10) ಕಾರ್ಕಳ ತಾಲೂಕಿನ ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ.
ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಎಂಬವರು ಬಾವಿಯ ಮಣ್ಣು ತೆಗೆಯಲೆಂದು ಬಾವಿಗಿಳಿದಿದ್ದು, ರಾಜೇಶ್ ಎಂಬವರು ಮೇಲಕ್ಕೆ ಬರುವಾಗ ಬಿದ್ದು ಗಾಯಗೊಂಡಿದ್ದರು, ಇವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ್ ಕೂಡ ಬಾವಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ಬಾವಿಯಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಯಗೊಂಡಿದ್ದ ರಾಜೇಶ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಸಾಗಿಸಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಸಿಬ್ಬಂದಿ ರೂಪೇಶ್, ಸುರೇಶ, ಮುಜಾಮಿಲ್, ದಿನೇಶ್, ಗಣೇಶ್, ನಿತ್ಯಾನಂದ ಭಾಗವಹಿಸಿದ್ದರು.
- Advertisement -








