

ನವದೆಹಲಿ: ಕಾನೂನುಬಾಹಿರ ಬಂಧನ ಸೇರಿದಂತೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ತುರ್ತು ಪ್ರಕರಣಗಳಲ್ಲಿ ನಾಗರಿಕರಿಗೆ 24×7 ನ್ಯಾಯಾಲಯಗಳ ಪ್ರವೇಶ ಕಲ್ಪಿಸುವ ಕುರಿತು ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.ವಕೀಲ ಮಹೇರವಿಶ್ ರೇನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಸಂಬಂಧ ಹೈಕೋರ್ಟ್ಗಳಿಗೆ ನೋಟಿಸ್ ಜಾರಿಗೊಳಿಸಿದೆ.


ಇದೇ ವೇಳೆ, ತುರ್ತು ಅಲ್ಲದ ಪ್ರಕರಣಗಳಿಗೂ 24 ಗಂಟೆಗಳ ನ್ಯಾಯಾಲಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸುವ ಜವಾಬ್ದಾರಿ ನ್ಯಾಯಾಂಗದ ಬದಲಿಗೆ ಕಾರ್ಯಾಂಗದ ಮೇಲಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ನ್ಯಾಯಾಲಯಕ್ಕೆ ತಿಳಿಸಿದರು.ವಾರಾಂತ್ಯ, ರಜಾದಿನಗಳು ಅಥವಾ ತಡರಾತ್ರಿ ನಡೆಯುವ ಬಂಧನ, ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ, ಗಡೀಪಾರು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶವಿಲ್ಲದಿರುವುದು ನಾಗರಿಕರ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂದು ಅರ್ಜಿದಾರರು ವಾದಿಸಿದರು.

ಪ್ರಸ್ತುತ ನ್ಯಾಯಾಲಯಗಳ ನಿಗದಿತ ಕಾರ್ಯಾವಧಿ, ಕೆಲಸದ ದಿನಗಳು ಹಾಗೂ ಸೀಮಿತ ರಜಾ ಪೀಠಗಳ ಕಾರಣದಿಂದ ಎಲ್ಲ ಸಮಯದಲ್ಲೂ ನ್ಯಾಯಾಂಗದ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.








