
ಸುಳ್ಯ: ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಶಿವಪ್ರಸಾದ್ ಎಂಬವರು ತಮ್ಮ 20 ವರ್ಷಗಳ ಹಳೆಯ ದ್ವಿಚಕ್ರ ವಾಹನವನ್ನು ಜುಲೈ 16ರಂದು ಸುಳ್ಯದ ವಿವೇಕಾನಂದ ಜಂಕ್ಷನ್ ಸಮೀಪದ ಮಾಲಾಶ್ರೀ ಗ್ಯಾರೇಜ್ ಬಳಿ, ಗ್ಯಾರೇಜ್ ಮಾಲೀಕರ ಗಮನಕ್ಕೆ ತರದೆ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದರು.ಜುಲೈ 19ರಂದು ಹಿಂದಿರುಗಿ ಬಂದಾಗ ವಾಹನವನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಅದು ಕಾಣಿಸದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ.
ಈ ಕುರಿತು ಮಾಹಿತಿ ಪಡೆದ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರು ವಾಹನದ ಮಾಲೀಕ ಶಿವಪ್ರಸಾದ್ ಅವರನ್ನು ಸಂಪರ್ಕಿಸಿದ್ದು, ಅವರು ಜುಲೈ 26ರಂದು ಠಾಣೆಗೆ ಬಂದು ದೂರು ನೀಡುವುದಾಗಿ ತಿಳಿಸಿದ್ದರು. ಆದರೆ, ನಿಗದಿತ ದಿನದಂದು ಅವರು ಠಾಣೆಗೆ ಹಾಜರಾಗಿ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ವಾಹನ ನಾಪತ್ತೆ ಕುರಿತು ಅಧಿಕೃತ ದೂರು ದಾಖಲಾಗದ ಕಾರಣ ಪ್ರಕರಣ ದಾಖಲಿಸುವ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಪೊಲೀಸರು ವಾಹನದ ಮಾಲೀಕರಿಗೆ ಶೀಘ್ರದಲ್ಲೇ ಠಾಣೆಗೆ ಬಂದು ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ.








