


ಬಾಗಲಕೋಟೆ: ವ್ಯಕ್ತಿಯೊಬ್ಬ ಪತ್ನಿಗೆ ನೇಣು ಹಾಕಿ ಆಕೆ ಒದ್ದಾಡುವುದನ್ನು ಅತ್ತೆ– ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಅಮಾನವೀಯ ಘಟನೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಭಾಗ್ಯಶ್ರೀ ಜಿಗಳೂರು(23) ಕೊಲೆಯಾದ ಮಹಿಳೆ. ಆಕೆಯ ಪತಿ ಪ್ರವೀಣ್ ಜಿಗಳೂರು ಹತ್ಯೆಗೈದ ಆರೋಪಿ.
ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನದಿಂದ ಕಟ್ಟಿಗೆಯಿಂದ ಹಲ್ಲೆಗೈದು ಆಕೆಗೆ ನೇಣು ಬಿಗಿದಿದ್ದ. ಬಳಿಕ ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ–ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಾನೆ. ಅಲ್ಲದೇ ಆಕೆ ಒದ್ದಾಡುವುದನ್ನು ವಿಡಿಯೋ ಕೂಡ ಮಾಡಿದ್ದಾನೆ.
ಪತ್ನಿ ಜಗಳವಾಡಿ ಎರಡು ತಿಂಗಳ ಹಿಂದೆ ತವರುಮನೆ ಮಹಾಲಿಂಗಪುರಕ್ಕೆ ಹೋಗಿದ್ದಳು. ಚೆನ್ನಾಗಿ ಕೂಡಿ ಬಾಳುತ್ತೇವೆ ಎಂದು ಜು.27 ರಂದು ಗಲಗಲಿಗೆ ಕರೆತಂದಿದ್ದ ಪ್ರವೀಣ. ಅದೇ ದಿನ ಸಂಜೆ ಆಕೆಯನ್ನು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಬೀಳಗಿ ಪೊಲೀಸರು, ಎಸ್ಪಿ ಸಿದ್ದಾರ್ಥ್ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.








