
ಹೊಸದಿಲ್ಲಿ: ಜನರು ಆರ್ಥಿಕ ಉಪಯೋಗ ಮುಗಿದ ಬಳಿಕ ಜಾನುವಾರುಗಳನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ಅನಾಥವಾಗಿ ಬಿಟ್ಟುಬಿಡುತ್ತಾರೆ. ಆದರೆ, ಇದೇ ಜಾನುವಾರುಗಳನ್ನು ಆಹಾರಕ್ಕಾಗಿ ಬಳಸಿದರೆ ಸಿಟ್ಟಿಗೇಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಜಾನುವಾರುಗಳ ಬಗ್ಗೆ ಸಮಾಜದಲ್ಲಿ ಕಂಡುಬರುವ ಗಮನಾರ್ಹ ಸಾಂಸ್ಕೃತಿಕ ವಿರೋಧಾಭಾಸವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ ಎಂದು livelaw.in ವರದಿ ಮಾಡಿದೆ.
ಪಂಜಾಬ್ನ ಸಂಗ್ರೂರ್ನಲ್ಲಿ ಬೀದಿ ಹೋರಿ ದಾಳಿ ಪ್ರಕರಣದ ಕುರಿತ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ಜಾನುವಾರುಗಳಿಂದ ಉಂಟಾಗುತ್ತಿರುವ ಅಪಾಯವನ್ನು ಪರಿಶೀಲಿಸಿದ ನ್ಯಾಯಾಲಯ, ಸಾರ್ವಜನಿಕರ ಧೋರಣೆ ಮತ್ತು ಸರಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಜಾನುವಾರುಗಳನ್ನು ಸಾಕುವ ನೈತಿಕ ಹೊಣೆಗಾರಿಕೆ ಕುರಿತು ಮಾತನಾಡಿದ ನ್ಯಾಯಪೀಠ, ಆದರ್ಶ ಸಮಾಜದಲ್ಲಿ ಯಾರಾದರೂ ಪ್ರಾಣಿಯನ್ನು ಮನೆಗೆ ತಂದು ಸಾಕಿದರೂ ಅಥವಾ ಆರ್ಥಿಕ ಲಾಭಕ್ಕಾಗಿ ಬೆಳೆಸಿದರೂ ಅದರ ಸಂಪೂರ್ಣ ಜೀವಿತಾವಧಿಯವರೆಗೆ ಆರೈಕೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳು ವಿಚಾರಣೆಯ ವೇಳೆ ಸಮಾಜದಲ್ಲಿರುವ ವಿರೋಧಾಭಾಸವನ್ನು ಗಮನಿಸಿದರು. ಉಪಯೋಗವಿಲ್ಲದ ಹಸುಗಳು ಮತ್ತು ಹೋರಿಗಳನ್ನು ಮಾಲಕರು ಅವುಗಳ ಸುರಕ್ಷತೆ ಅಥವಾ ಸಾರ್ವಜನಿಕ ಅಪಾಯದ ಬಗ್ಗೆ ಕಾಳಜಿ ವಹಿಸದೆ ಬೀದಿಯಲ್ಲಿ ಬಿಡುತ್ತಾರೆ. ಆದರೆ ಅದೇ ಪ್ರಾಣಿಗಳನ್ನು ಯಾರಾದರೂ ಆಹಾರಕ್ಕಾಗಿ ವಧಿಸಿದರೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ.








