ವಿಜಯವಾಡ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆ ಹೆಚ್ಚಾಗಿದೆ. ದಿನೇದಿನೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಯಾ ರಾಜ್ಯಗಳು ತಮಗೆ ಅನುಗುಣವಾಗಿ ನಿಯಮಗಳನ್ನು ಜಾರಿ ಮಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಸರ್ಕಾರಗಳು ಕಡ್ಡಾಯ ಮಾಡಿವೆ.
ಯಾರು ಮಾಸ್ಕ್ ಧರಿಸುವುದಿಲ್ಲವೋ ಅಂತವರಿಂದ ದಂಡ ವಸೂಲಿ ಸಹ ಮಾಡಲಾಗುತ್ತಿದೆ. ಆದರೆ, ಈ ದಂಡ ವಸೂಲಿ ಕೆಲವೊಮ್ಮೆ ತಾರಕಕ್ಕೇರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಉದಾಹರಣೆಗಗಳು ನಮ್ಮ ಮುಂದಿವೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾಸ್ಕ್ ಧರಿಸದಿದ್ದರೆ ಯಾರು ಕೇಳಲ್ಲ. ಆದರೆ, ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತ್ತಾರೆಂಬ ಆರೋಪವಿದೆ.
ಆದರೆ, ಸರ್ಕಾರದ ನಿಯಮ ಎಲ್ಲರಿಗೂ ಒಂದೇ ಎಂಬುದನ್ನು ಇಲ್ಲೊಬ್ಬ ಪೊಲೀಸ್ ವರಿಷ್ಠಧಿಕಾರಿ ನಿರೂಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗುಂಟೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅಮ್ಮಿರೆಡ್ಡಿ ಮಾಸ್ಕ್ ಧರಿಸದವರ ವಿರುದ್ಧ ಭಾನುವಾರ ವಿಶೇಷ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ತಳ್ಳೂರು ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ ರಾವ್ ಮಾಸ್ಕ್ ಧರಿಸದೆಯೇ ತಮ್ಮ ಮುಂದೆ ಹಾದು ಹೋಗಿದ್ದನ್ನು ಅಮ್ಮಿರೆಡ್ಡಿ ಅವರು ಗಮನಿಸಿದರು.
ತಮ್ಮ ಸಿಬ್ಬಂದಿ ಸಹಾಯದಿಂದ ವೃತ್ತನಿರೀಕ್ಷಕರನ್ನು ಬರಹೇಳಿದ ಎಸ್ಪಿ, ಮಾಸ್ಕ್ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದರು. ಕರ್ತವ್ಯಕ್ಕೆ ಹಾಜರಾಗುವ ಆತುರದಲ್ಲಿ ಮರೆತುಬಿಟ್ಟೆ ಎಂದು ಸಿಐ ಪ್ರತಿಕ್ರಿಯಿಸಿದರು. ಆದರೆ, ಸಿಐ ಉತ್ತರದಿಂದ ಸಮಾಧಾನಗೊಳ್ಳದ ಎಸ್ಪಿ, ಕರೊನಾ ಬಗ್ಗೆ ಸಲಹೆ ನೀಡಿ, ಮಾಸ್ಕ್ ಧರಿಸದಿದ್ದಕ್ಕೆ ದಂಡ ವಿಧಿಸಿದರು. ಬಳಿಕ ತಾವೇ ಸಿಐಗೆ ಮಾಸ್ಕ್ ಧರಿಸಿದರು.
ಇದೇ ವೇಳೆ ಸಾರ್ವಜನಿಕರಿಗೂ ಮಾಸ್ಕ್ ಧರಿಸಲು ಎಸ್ಪಿ ತಿಳಿ ಹೇಳಿದರು. ಸ್ಥಳೀಯ ವ್ಯಾಪಾರಿಗಳ ಬಳಿ ಹೋಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರು. ಎಸ್ಪಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.